ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಅವರು ಕಳೆದ ಸೋಮವಾರ ಮಧ್ಯರಾತ್ರಿ ಮಾರುವೇಷದಲ್ಲಿ ದಾಳಿ ನಡೆಸಿ ಮರಳು ಸಮೇತ ನಾಲ್ಕು ಟಿಪ್ಪರ್ ಲಾರಿ ವಶಕ್ಕೆ ತೆಗೆದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಕನ್ನಾಳ ಹಳ್ಳದಿಂದ ಅಕ್ರಮದಿಂದ ಸಾಗಿಸುತ್ತಿದ್ದ ನಾಲ್ಕು ಟಿಪ್ಪರ್ಗಳು ಗಂಗನಾಳ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಟೀ ಶರ್ಟ್ ಧರಿಸಿ, ತಲೆಗೆ ಮಫ್ಲರ್ ಸುತ್ತಿದ್ದ ತಹಶೀಲ್ದಾರ್ ಎಂ. ಸಿದ್ದೇಶ ಅವರು ಟಿಪ್ಪರ್ಗಳ ಮಾಲೀಕರನ್ನು ವಿಚಾರಿಸುತ್ತಿದ್ದಂತೆ ಚಾಲಕರು ಕತ್ತಲಿನಲ್ಲಿ ಟಿಪ್ಪರ್ ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದರು.

ಈ ವೇಳೆ, ನಾಲ್ಕು ಟಿಪ್ಪರ್ ಮರಳು ಸಮೇತ ಜಪ್ತಿ ಮಾಡಿದ್ದಾರೆ. ಸುಮಾರು 30 ಸಾವಿರ ರೂ. ಮೌಲ್ಯದ ಮರಳಿದು ಎಂದು ಅಂದಾಜಿಸಲಾಗಿದೆ. ಟಿಪ್ಪರ್ ಚಾಲಕರು ಪರಾರಿಯಾಗಿದ್ದು, ಲಾರಿ ವಶಕ್ಕೆ ತೆಗೆದುಕೊಂಡು ಟಿಪ್ಪರ್ ಮಾಲೀಕ ಹಾಗೂ ಚಾಲಕ ಸೇರಿದಂತೆ 8 ಜನರ ವಿರುದ್ಧ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.