ಕೊಪ್ಪಳ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಭ್ರಷ್ಟಾಚಾರ ತೊಲಗಿಸಿ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತದಾರರ ಮನವೋಲೈಕೆ ಕಸರತ್ತು ನಡೆಸಿದರು.
ಜಿಲ್ಲೆಯ ಕಾರಟಗಿಯಲ್ಲಿ ನಡೆದ ಯವಶಕ್ತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆತ್ಮ ಕೊಪ್ಪಳದಲ್ಲಿದೆ. ನೀವು ಸಂಗಣ್ಣ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ. ಆಗ ಆ ಅತ್ಮ ಏನಾಗಬೇಕೋ ಅದು ಆಗುತ್ತೆ. ಈ ಬಾರಿ ನೀವು ಒಂದು ವೋಟ್ ಹಾಕಿದರೆ ಎರಡು ಸರ್ಕಾರ ಬರುತ್ತವೆ. ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನು ಹೊಡೆಯಲು ನಿಮಗೆ ಅವಕಾಶವಿದೆ ಎಂದರು.
ಪತಿ ಇದ್ರೂ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಇಷ್ಟು ದಿನ ಕುಂಕುಮ ಇರಲಿಲ್ಲ. ಬೇಕಾದರೆ ಆರು ತಿಂಗಳ ಹಿಂದಿನ ಫೋಟೋ ನೋಡಿ. ಆದ್ರೆ, ಈಗ ಚುನಾವಣೆಗಾಗಿ ಅವರ ಹಣೆ ಮೇಲೆ ತಿಲಕ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. ನರೇಂದ್ರ ಮೋದಿ ದೇವರಭಕ್ತ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಎಲೆಕ್ಷನ್ ಭಕ್ತರು ಎಂದು ಬಿ.ಎಲ್ ಸಂತೋಷ್ ತಮ್ಮ ಹೇಳಿದರು.
ನಗರದ ಹೊರವಲಯದ ಎಸ್.ಎಲ್.ಎನ್.ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಸಂವಿಧಾನದ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಅವರು ನಮ್ಮೆಲ್ಲರಿಗೆ ಮತದಾನದ ಹಕ್ಕು ದಯಪಾಲಿಸಿದ್ದಾರೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಅರ್ಹರಾದವರು ಎಲ್ಲರೂ ಮತ ಚಲಾಯಿಸಬೇಕು ಎಂದು ಮತದಾನದ ಮಹತ್ವ ತಿಳಿಸಿದರು.