ಕುಷ್ಟಗಿ (ಕೊಪ್ಪಳ): ಅನುಭವಿ ಕೃಷಿಕರಿಂದ ಬೇಸಾಯದ ಬಗ್ಗೆ ಹೆಚ್ಚಿನ ಜ್ಞಾನ ಪಡೆದು ಸ್ವಾವಲಂಬಿಗಳಾಗಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ರೈತರಿಗೆ ಸಲಹೆ ನೀಡಿದರು.
ಕೃಷಿ ಇಲಾಖೆಯಲ್ಲಿ ತಾಲೂಕಿನ ನಾಲ್ವರು ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಮಾತನಾಡಿದ ಅವರು, ಅನುಭವಿ ರೈತರ ಸಲಹೆಗಳಿಂದ ಕೃಷಿಯಲ್ಲಿ ಮುಂದುವರೆಯಲು ಸಾದ್ಯವಿದೆ. ತಾವರಗೇರಾದ ಬಸಯ್ಯ ಹಿರೇಮಠ ಅವರು ನುಗ್ಗೆ ಸೊಪ್ಪು ಬೆಳೆದು ವೈಜ್ಞಾನಿಕ ಸಂಸ್ಕರಿಸಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಹಂಚಿನಾಳ ಗ್ರಾಮದ ರೈತ ದೊಡ್ಡಪ್ಪ ರಸರಡ್ಡಿ ಅವರು ಒಂದು ಎಕರೆಯಲ್ಲಿ 18 ಕ್ವಿಂಟಲ್ ನವಣೆ ಬೆಳೆದಿದ್ದಾರೆ. ಈ ಮಾದರಿ ರೈತರಿಗೆ ಹೆಚ್ಚು ಬೆಳೆದು, ಬಡತನ ನಿವಾರಿಸಿ ಸ್ವಾವಲಂಬನೆ ಬದುಕು ನಡೆಸಲು ಸಾಧ್ಯವಿದೆ ಎಂದರು.
ಇದೇ ವೇಳೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ದೊಡ್ಡಪ್ಪ ರಸರಡ್ಡಿ, ಶಂಕ್ರಪ್ಪ ಕವಡಿಕಾಯಿ, ಶಿವನಗೌಡ ಪಾಟೀಲ ಟಕ್ಕಳಕಿ, ಬಸಯ್ಯ ಹಿರೇಮಠ ಅವರಿಗೆ ತಲಾ 10,000 ರೂ. ಚೆಕ್ ವಿತರಿಸಲಾಯಿತು.