ಕೊಪ್ಪಳ : ವಿಧಾನಸಭೆ ಕಲಾಪ ವರದಿಗೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಛಾಯಾಗ್ರಾಹಕರಿಗೆ ನಿರ್ಬಂಧ ಹೇರಿರುವ ಸ್ಪೀಕರ್ ಕ್ರಮವನ್ನು ಕೊಪ್ಪಳ ಮೀಡಿಯಾ ಕ್ಲಬ್ ಖಂಡಿಸಿದ್ದು, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿಗೆ ಮನವಿ ಸಲ್ಲಿಸಿದರು.
ಗುರುವಾರದಿಂದ ಮೂರು ದಿನಗಳವರೆಗೆ ಆರಂಭವಾಗಿರುವ ವಿಧಾನಮಂಡಲ ಅಧಿವೇಶನಕ್ಕೆ ಖಾಸಗಿ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಛಾಯಾಗ್ರಾಹಕರಿಗೆ ಕಲಾಪದಲ್ಲಿ ನಿರ್ಬಂಧ ಹೇರಲಾಗಿದೆ. ಇದು ಸರ್ಕಾರದ ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಮಾಡಿರುವ ಹವಣಿಕೆಯಾಗಿದೆ ಎಂದು ಆರೋಪಿಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿದ್ದಾರೆ.
ಈ ಹಿಂದೆ ವಿಧಾನ ಮಂಡಲ ಕಲಾಪದಲ್ಲಿ ಸದನದಲ್ಲಿಯೇ ಕೆಲ ಸಚಿವರು ಅಶ್ಲೀಲ ವಿಡಿಯೋಗಳನ್ನು ನೋಡಿದ್ದರು. ಇದನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಜನರ, ರಾಜ್ಯದ ಹಿತಕ್ಕಾಗಿ ನಡೆಯುವ ಸದನದ ಕಲಾಪವನ್ನು ಗೌಪ್ಯವಾಗಿ ನಡೆಸುವ ಉದ್ದೇಶವೇನು, ಸದನದಲ್ಲಿ ಮಾಧ್ಯಮಗಳ ನಿರ್ಬಂಧ ಮಾಡುವ ಮೂಲಕ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನವಿದು. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯಪಾಲರು ಕ್ರಮಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ಆಗ್ರಹಿಸಿದ್ದಾರೆ.