ಕುಷ್ಟಗಿ (ಕೊಪ್ಪಳ): ಸಣ್ಣ ನೀರಾವರಿ ಇಲಾಖೆಯ ಯಡವಟ್ಟಿನಿಂದ ನಿಡಶೇಸಿ ಕೆರೆ ಅಭಿವೃದ್ಧಿ ಸಮಿತಿಯ ಬಗ್ಗೆ ಅಪನಂಬಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಸೃಷ್ಟಿಯಾಗುತ್ತಿದೆ. ಇನ್ಮುಂದೆ ಕುಷ್ಟಗಿ ತಾಲೂಕಾ ಕೆರೆಗಳ ಅಭಿವೃದ್ಧಿ ಸಮಿತಿ ಅಸ್ತಿತ್ವದಲ್ಲಿರುವುದಿಲ್ಲ ವಿಸರ್ಜಿಸಿರುವುದಾಗಿ ಸಮಿತಿ ಅಧ್ಯಕ್ಷರಾಗಿದ್ದ ದೇವೇಂದ್ರಪ್ಪ ಬಳೂಟಗಿ ಹೇಳಿದರು.
ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಾರ್ವಜನಿಕರ ಹಾಗೂ ದಾನಿಗಳ ಸಹಕಾರದ ಮೇರೆಗೆ ನಿಡಶೇಸಿ ಕೆರೆ ಅಭಿವೃಧ್ಧಿಯಾಗಿ, ಉತ್ತಮ ಮಳೆಯಾಗಿ ಕೆರೆಯೂ ಭರ್ತಿಯಾಗಿ ಸಾರ್ವಜನಿಕವಾಗಿ ಸಾಕಷ್ಟು ಅನುಕೂಲವೇ ಆಗಿದೆ. ಆದರೆ ಸಣ್ಣ ನೀರಾವರಿ ಇಲಾಖೆ ಕೆರೆ ಅಭಿವೃಧ್ಧಿ ಸಂದರ್ಭದಲ್ಲಿ 80 ಲಕ್ಷ ರೂ. ಮೊತ್ತವನ್ನು ಕೆರೆಯ ಸಮಿತಿ ಗಮನಕ್ಕೆ ತರದೇ ಸರ್ಕಾರದಿಂದ ಮಂಜೂರಾತಿ ಮಾಡಿಸಿಕೊಂಡಿದೆ. ಕೆರೆಯ ಅಭಿವೃಧ್ಧಿ ಸಂದರ್ಭದಲ್ಲಿ ಸಾರ್ವಜನಿಕರು ನೀಡಿದ ಉದಾರ ದೇಣಿಗೆಯಂತೆ ಸಣ್ಣ ನೀರಾವರಿ ಇಲಾಖೆಯೂ ಸಹ ಕೊಡುಗೆ ನೀಡುತ್ತದೆ ಎಂದು ಕೊಂಡಿದ್ದೇವು. ಆದರೆ ಸಾರ್ವಜನಿಕರ ಸಹಾಯದಿಂದ ನಿರ್ವಹಿಸಿದ ಕೆಲಸದಲ್ಲಿಯೇ ಬಾಚಿಕೊಂಡಿದೆ.
ದಾನಿಗಳು ಕೆರೆ ಅಭಿವೃದ್ಧಿಗೆ ಜೆಸಿಬಿ, ಹಿಟಾಚಿ ಬಾಡಿಗೆ ಸಹ ತೆಗೆದುಕೊಳ್ಳದೇ ಕೆಲಸಕ್ಕೆ ಬಿಟ್ಟಿದ್ದರು. ಅದೇ ತರಹ ಸಣ್ಣ ನೀರಾವರಿ ಇಲಾಖೆ ತಲಾ ಮೂರು ಡೋಜರ್, ರೋಲರ್, ತಲಾ 1 ಜೆಸಿಬಿ, ಟ್ರಾಕ್ಟರ್, ಟ್ಯಾಂಕರ್ ಇತ್ಯಾಧಿ ಕೆಲಸಕ್ಕೆ ಬಿಟ್ಟು, ನಾಲ್ಕೈದು ಕಿ.ಮೀ. ಸರಹದ್ದಿನ ಒಡ್ಡು ನಿರ್ಮಿಸಿದ್ದಾಗಿ ಕ್ರಮಬದ್ದವಾಗಿ ಬಿಲ್ ಮಾಡಿಕೊಂಡಿದೆ. ಹೀಗೆಯೇ ಬಿಟ್ಟರೆ ಸಣ್ಣ ನೀರಾವರಿ ಇಲಾಖೆ ಅಕ್ರಮವಾಗಿ ಕೋಟಿಗಟ್ಟಲೆ ಲೂಠಿಗೆ ಇಳಿಯುವ ಸಾಧ್ಯತೆಗಳ ಕಳವಳ ವ್ಯಕ್ತಪಡಿಸಿದರು.
ಇದಕ್ಕೆಲ್ಲಾ ಸಮಿತಿಯೇ ಹೊಣೆ ಹೊರಲು ಸಿದ್ದವಿಲ್ಲ. ಈ ಕೆರೆಯ ವಿಚಾರದಲ್ಲಿ ಗವಿಶ್ರೀಗಳ ಭಾವಚಿತ್ರ ಬಹಿರಂಗ ಪ್ರಕಟಣೆಯಲ್ಲಿ ಬಳಸುತ್ತಿರುವುದು ನೋವು ತಂದಿದೆ. ಅವರು ನಿಡಶೇಸಿ ಕೆರೆ ಅಭಿವೃಧ್ಧಿ ಸಮಿತಿಯನ್ನು ಇಂದಿನಿಂದ ವಿಸರ್ಜನೆಗೊಳಿಸಿದ್ದು, ಕೆರೆಯ ಪ್ರದೇಶದಲ್ಲಿ ನಾಟಿ ಮಾಡಿದ್ದ ಗಿಡಗಳ ಸಂರಕ್ಷಣೆಯ ಸಾರ್ವಜನಿಕರಾಗಿ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದು ಇನ್ಮುಂದೆ ಈ ಕೆರೆಗೂ, ಸಮಿತಿಗೂ ಸಂಬಂಧವೇ ಇಲ್ಲ ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿದ್ದ ಪರಸ್ಪರ ಕತ್ತಿ, ಅಮರೇಶ್ವರ ಶೆಟ್ಟರ್, ಎಸ್.ಎಚ್. ಹಿರೇಮಠ, ಮಲ್ಲಿಕಾರ್ಜುನ ಬಳಿಗಾರ, ತಾಜುದ್ದೀನ್ ದಳಪತಿ, ಮಹಾಂತಯ್ಯ ಅರಳಲಿ ಮಠ, ಸುಬಾನಿ ಆರ್ ಟಿ ಮತ್ತಿತರಿದ್ದರು.