ಗಂಗಾವತಿ: ಕೆರೆ ಹೂಳೆತ್ತುವ ಕಾರ್ಯ ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವುದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಾ ಸಿದ್ಧವಿದೆ ಎಂದು ಸಂಸ್ಥೆಯ ಯೋಜನಾ ನಿರ್ದೇಶಕ ಶೇಖರಗೌಡ ಹೇಳಿದರು.
ತಾಲೂಕಿನ ಸಂಗಾಪುರ ಗ್ರಾಮದಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ವಂತಿಗೆ ಸಂಗ್ರಹಿಸಿ ಐತಿಹಾಸಿಕ ಪುರಾತನ ಲಕ್ಷ್ಮೀನಾರಾಯಣ ಕೆರೆಯ ಹೂಳನ್ನು ಎತ್ತುತ್ತಿರುವ ಸ್ಥಳಕ್ಕೆ ಶೇಖರಗೌಡ ಭೇಟಿ ನೀಡಿ, ನಮ್ಮ ಸಂಸ್ಥೆಯ ಅಧಿಕಾರಿಗಳು ಕೂಡ ಹೂಳೆತ್ತುವ ಕಾರ್ಯಕ್ಕೆ ಸಹಕಾರ ನೀಡುತ್ತಾರೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಶೇಖರಗೌಡ, ಹೂಳೆತ್ತುವ ರೂಪುರೇಷೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಲು ಜೂ.19 ರಂದು ಸಭೆ ಕರೆಯಲಾಗಿದೆ. ಅಲ್ಲಿ ಯೋಜನಾ ವೆಚ್ಚ, ಸಂಸ್ಥೆ ಭರಿಸಬಹುದಾದ ಮೊತ್ತದ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಸಭೆಗೆ ಆಗಮಿಸುವಂತೆ ರೈತರಿಗೆ ಸಂಸ್ಥೆಯ ಪ್ರತಿನಿಧಿಗಳು ಕೋರಿದರು.