ಗಂಗಾವತಿ: ಇಲ್ಲಿನ ಜುಲೈನಗರದ ಟಿಎಂಎಇ ಕಾಲೇಜಿನಲ್ಲಿ ನಡೆಯುತ್ತಿರುವ ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣದ ಪದವಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆ ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪರೀಕ್ಷೆ ನಡೆಯುತ್ತಿರುವ ಯಾವ ಕೊಠಡಿಯಲ್ಲೂ ಸಿಸಿ ಕ್ಯಾಮರಾ ಇಲ್ಲದಿರುವುದು, ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿಕೊಳ್ಳದಿರುವ ಕೆಲ ಲೋಪಗಳು ಕಂಡು ಬಂದವು. ಇವು ಸಹಜವಾಗಿ ಪರೀಕ್ಷೆಯ ಸಂದರ್ಭದಲ್ಲಿ ಸಾಮೂಹಿಕ ನಕಲಿಗೆ ಪೂರಕವಾದ ಅಂಶಗಳು ಎಂದು ಅಧಿಕಾರಿಗಳು ಮನಗಂಡರು.
ಈ ಹಿನ್ನೆಲೆಯಲ್ಲಿ ಕೂಡಲೆ ಕುವೆಂಪು ವಿವಿಯ ದೂರ ಶಿಕ್ಷಣ ಇಲಾಖೆಯ ಸಂಪರ್ಕ ಅಧಿಕಾರಿ ರಮೇಶ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪರೀಕ್ಷಾ ಕೇಂದ್ರದ ವಾಸ್ತವತೆ ವಿವರಿಸಿದರು. ಈ ಬಗ್ಗೆ ವಿವಿಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಜಂಟಿ ವರದಿ ನೀಡುವುದಾಗಿ ಬಿಇಒ ಮಾಹಿತಿ ನೀಡಿದರು.