ಗಂಗಾವತಿ: ಬಿಜೆಪಿಗರಿಗೆ ಸ್ವಂತ ಬಲದ ಮೇಲೆ ರಾಜಕೀಯ ಮಾಡುವ ಸಾಮರ್ಥ್ಯ ಇಲ್ಲ. ಕಾಂಗ್ರೆಸ್ ಪಕ್ಷದ ನೈತಿಕ ಬಲದಿಂದಲೇ ಅವರು ರಾಜಕಾರಣ ಮಾಡುತ್ತಾರೆ. ಹಾಗಾಗಿ ಅವರ ರಾಜಕೀಯಕ್ಕೆ ಕಾಂಗ್ರೆಸ್ ಪ್ರೇರಣೆ ಎಂದು ಮಾಜಿ ಸಚಿವ, ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿರುವವರನ್ನು ಕರೆದುಕೊಂಡು ಹೋಗಿ ರಾಜಕೀಯ ಮಾಡುತ್ತಾರೆ. ಬೇಕಾದರೆ, ರಾಜ್ಯ ರಾಜಕಾರಣವನ್ನೇ ಗಮನಿಸಿ. ನಮ್ಮ ಪಕ್ಷದಿಂದ ಗೆದ್ದವರನ್ನು ಕರೆದುಕೊಂಡು ಹೋಗಿ ರಾಜೀನಾಮೆ ಕೊಡಿಸಿ ಅಲ್ಲಿ ಸರ್ಕಾರ ರಚಿಸಿದ್ದಾರೆ. ಗಂಗಾವತಿ, ಯಲಬುರ್ಗಾ, ಕುಕನೂರು ಹಾಗೂ ಕೊಪ್ಪಳದಲ್ಲೂ ಕೂಡಾ ನಮ್ಮವರನ್ನೇ ಕರೆದುಕೊಂಡು ಹೋಗಿ ರಾಜಕೀಯ ಮಾಡುತ್ತಾರೆ.
ಬಿಜೆಪಿಯ ಸಿದ್ಧಾಂತಗಳನ್ನು ಒಪ್ಪಿ ಹೋಗುತ್ತಾರೆ ಎಂದರೆ ನಮ್ಮವರು ಹೋಗಲಿ. ಹಾಗಾದಲ್ಲಿ ಹೆಚ್ಚಿಗೆ ತಲೆಕೆಡಿಸಿಕೊಳ್ಳಲು ಹೋಗಲ್ಲ. ಆದರೆ ನಮ್ಮ ಪಕ್ಷದ ಸದಸ್ಯರನ್ನು ಕಿಡ್ನಾಪ್ ಮಾಡಿ ಹೊಡೆದು, ಬಡಿದು ಕರೆದುಕೊಂಡು ಹೋಗುವ ಸಂಸ್ಕಾರ ಗಮನಿಸಿದರೆ ಬಿಜೆಪಿ ಜಿಲ್ಲೆಯಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಇಳಿದಿದೆ. ಗುಂಡಾಗಿರಿಯನ್ನು ಬಿಜೆಪಿಗರು ಕರಗತ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಮಯ ಬಂದರೆ ಬುದ್ಧಿ ಕಲಿಸುವ ಹಂತಕ್ಕೆ ಇಳಿಯಬೇಕಾಗುತ್ತದೆ ಎಂದಿರುವ ತಂಗಡಗಿ ಬಿಜೆಪಿ ಶಾಸಕರು ಹಾಗೂ ಮುಖಂಡರಿಗೆ ಎಚ್ಚರಿಕೆ ನೀಡಿದರು.