ಗಂಗಾವತಿ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಆಗಸ್ಟ್ 11ರಂದು ನಡೆದಿದ್ದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಇದುವರೆಗೂ ಸೌಹಾರ್ದ ವಾತಾವರಣ ನಿರ್ಮಾಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಗಣೇಶ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಿ, ಕೊಪ್ಪಳದ ಉಪ ವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ.
ಆಗಸ್ಟ್ 31ರಂದು ಗಣೇಶ ಹಬ್ಬವಿದ್ದು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಹಬ್ಬ ಆಚರಣೆಗೆ ಅವಕಾಶ ನೀಡಿದ್ದಲ್ಲಿ ಮತ್ತೆ ಗುಂಪು ಘರ್ಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಅವಕಾಶಗಳಿವೆ. ಗಣೇಶ ಉತ್ಸವ ರದ್ದು ಮಾಡುವಂತೆ ಉಪವಿಭಾಗ ಅಧಿಕಾರಿ ಬಸವಣೆಪ್ಪ ಕಳಶೆಟ್ಟಿ, ಕನಕಗಿರಿ ತಹಶೀಲ್ದಾರ್ ಮತ್ತು ಹುಲಿಹೈದರದ ಪಿಡಿಒಗೆ ಸೂಚನೆ ನೀಡಿದ್ದಾರೆ.
![Ganesha celebration in Huli Hydera village](https://etvbharatimages.akamaized.net/etvbharat/prod-images/kn-gvt-06-30-ganesh-festival-ban-in-hulihaidra-vis-kac10005_30082022182124_3008f_1661863884_983.jpg)
ಗ್ರಾಮದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ ನಡೆದು ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಅಲ್ಲದೇ ಎರಡೂ ಗುಂಪಿನ ನೂರಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದ್ದು, ಅವರಿನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಗ್ರಾಮದಲ್ಲಿ ಇನ್ನೂ ಪ್ರಕ್ಷುಬ್ದ ವಾತಾವರಣವೇ ಇದೆ.
ಇದನ್ನೂ ಓದಿ: ಹುಲಿಹೈದರ ಗಲಾಟೆ ಪ್ರಕರಣ.. ಪಿಐ ಸೇರಿ ನಾಲ್ವರ ಅಮಾನತು