ಕೊಪ್ಪಳ : ಅದೆಲ್ಲೋ ದೂರದಲ್ಲಿ ಮಣ್ಣಿನ ಕುಕ್ಕರ್, ಹಾಟ್ ಬಾಕ್ಸ್, ಇಡ್ಲಿಪಾತ್ರೆ ಸಿಗುತ್ತೆ ಅನ್ನೋದನ್ನು ನೀವು ಕೇಳಿರಬಹುದು, ನೋಡಿರಲೂಬಹುದು. ಆದ್ರೆ ಕೊಪ್ಪಳದಲ್ಲೂ ಇಂತಹ ಮಣ್ಣಿನ ಪರಿಕರಗಳು ಸಿಗುವುದಕ್ಕೆ ಸಾಧ್ಯವೇ ಅಂತಾ ಹುಬ್ಬೇರಿಸಬೇಡಿ. ನಿಮ್ಮ ಊಹೆ ತಪ್ಪಾಗಬಹುದು. ಜನರ ಅಭಿರುಚಿಗೆ ತಕ್ಕಂತೆ ಕುಂಬಾರಿಕೆಗೂ ಅಧುನಿಕ ಟಚ್ ನೀಡಲಾಗಿರುವ ಆಧುನಿಕ ಗೃಹಬಳಕೆಯ ವಸ್ತುಗಳು ನಗರದಲ್ಲಿ ರೂಪ ಪಡೆದು ಜನಮನ ಸೆಳೆಯುತ್ತಿವೆ.
![Awesome Soil Accessories Available In Koppal Market](https://etvbharatimages.akamaized.net/etvbharat/prod-images/kn-kpl-01-13-desi-touch-story-visuals-7202284_13112020143457_1311f_01204_349.jpg)
ಬದಲಾದ ಕಾಲಘಟ್ಟದಿಂದಾಗಿ ಕುಲಕಸುಬುಗಳಿಂದ ಜನರು ದೂರವಾಗುತ್ತಿದ್ದಾರೆ. ಕೆಲವರು ಕುಲಕಸುಬು ಬಿಡಬಾರದು ಎಂಬ ಕಾರಣಕ್ಕೆ ಅದೇ ವೃತ್ರಿಯಲ್ಲಿ ಮುಂದುವರೆಯುತ್ತಾ ತಮ್ಮ ಕುಲಕಸುಬಿಗೆ ಆಧುನಿಕ ಟಚ್ ನೀಡುತ್ತಿದ್ದಾರೆ. ಸ್ಥಳೀಯ ಕುಂಬಾರಿಕೆ ವಸ್ತುಗಳ ಜೊತೆಗೆ ಜನರ ಅಭಿರುಚಿಗೆ ತಕ್ಕಂತೆ ಆಕರ್ಷಣಿಯವಾಗಿರುವ ವಸ್ತುಗಳನ್ನು ಬೇರೆ ಬೇರೆ ರಾಜ್ಯಗಳಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತಾ ಬದುಕು ನಡೆಸುತ್ತಿದ್ದಾರೆ. ಅಧುನಿಕ ಶೈಲಿಯ ಗೃಹ ವಸ್ತುಗಳ ಮಾದರಿಯಲ್ಲಿಯೇ ಮಣ್ಣಿನ ಗೃಹೋಪಯೋಗಿ ವಸ್ತುಗಳ ಅಂಗಡಿ ನಗರದಲ್ಲಿಯೂ ಆರಂಭವಾಗಿದ್ದು ಜನರ ಗಮನ ಸೆಳೆಯುತ್ತಿದೆ.
![Awesome Soil Accessories Available In Koppal Market](https://etvbharatimages.akamaized.net/etvbharat/prod-images/kn-kpl-01-13-desi-touch-story-visuals-7202284_13112020143457_1311f_01204_45.jpg)
ನಗರದ ಬಸವರಾಜ ಕುಂಬಾರ ಎಂಬುವವರು ತಮ್ಮ ಕುಂಬಾರಿಕೆಯ ವಸ್ತುಗಳ ಜೊತೆಗೆ ಗುಜರಾತಿನ ಕಲಾತ್ಮಕ ಮತ್ತು ಕಣ್ಮನ ಸೆಳೆಯುವ ಮಣ್ಣಿನ ವಿವಿಧ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಗ್ರಾಮ ಸ್ವರಾಜ್ಯ, ಸ್ವದೇಶಿ ಕೇಂದ್ರದ ಹೆಸರಿನ ಅಂಗಡಿಯಲ್ಲಿ ಮಣ್ಣಿನಿಂದಲೇ ಮಾಡಿರುವ ಕುಕ್ಕರ್, ಹಾಟ್ ಬಾಕ್ಸ್, ಇಡ್ಲಿಪಾತ್ರೆ, ಪಡ್ಡಿನ ಮಣೆ, ರೊಟ್ಟಿತವಾ, ನೀರಿನ ಜಗ್ಗುಗಳು, ಚಹಾದ ಕಪ್ಗಳು, ಮಡಿಕೆಗಳು, ಕುಡಿಕೆಗಳು, ನೀರಿನ ಬಾಟಲಿ, ಊಟದ ತಟ್ಟೆಗಳು ಸೇರಿದಂತೆ ಅತ್ಯಂತ ಆಕರ್ಷಕವಾಗಿರುವ ಅನೇಕ ವಸ್ತುಗಳು ಜನರನ್ನು ಸೆಳೆಯುತ್ತಿವೆ.
![Awesome Soil Accessories Available In Koppal Market](https://etvbharatimages.akamaized.net/etvbharat/prod-images/kn-kpl-01-13-desi-touch-story-visuals-7202284_13112020143451_1311f_01204_915.jpg)
ಜಗತ್ತು ಇಷ್ಟು ಮುಂದುವರೆದರೂ ಕೂಡ ಜನರು ಈಗ ಮಣ್ಣಿನ ಮಡಿಕೆಗಳನ್ನೇ ಬಯಸುತ್ತಿದ್ದಾರೆ. ಅಧುನಿಕ ಜೀವನ ಶೈಲಿಗೆ ಹೊಂದುವಂತಹ ರೀತಿಯಲ್ಲಿ ಮಣ್ಣಿನ ವಸ್ತುಗಳನ್ನು ಗುಜರಾತಿನಿಂದ ತರಿಸಿಕೊಂಡು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಂದಲೂ ಒಳ್ಳೆಯ ಬೇಡಿಕೆ ಇದೆ ಎನ್ನುತ್ತಾರೆ ವರ್ತಕ ಬಸವರಾಜ ಕುಂಬಾರ.
ಹಿಂದಿನ ಕಾಲದಲ್ಲಿ ಜನರು ಮಣ್ಣಿನ ಮಡಿಕೆ, ಕುಡಿಕೆಗಳನ್ನೇ ಅಡುಗೆ ಮಾಡಲು ಬಳಕೆ ಮಾಡುತ್ತಿದ್ದರು. ಇದರಿಂದ ಅವರ ಆರೋಗ್ಯವೂ ಚೆನ್ನಾಗಿರುತ್ತಿತ್ತು. ಅರೋಗ್ಯ ದೃಷ್ಟಿಯಿಂದ ಈಗ ಮತ್ತೆ ಜನರು ಮಣ್ಣಿನ ಮಡಿಕೆಗಳಲ್ಲಿ ಮಾಡುವ ಅಡುಗೆಗಳನ್ನು ಊಟ ಮಾಡಲು ಬಯಸುತ್ತಾರೆ. ಈಗ ಕೊಪ್ಪಳದಲ್ಲಿ ಆಧುನಿಕ ಜೀವನ ಶೈಲಿಗೆ ಒಪ್ಪುವಂತಹ ಗೃಹೋಪಯೋಗಿ ವಸ್ತುಗಳ ಅಂಗಡಿ ಓಪನ್ ಆಗಿರೋದು ಒಳ್ಳೆಯದೇ. ಜನರು ಮತ್ತೆ ನಮ್ಮ ಮಣ್ಣಿನ ಸಂಸ್ಕೃತಿಯತ್ತ ವಾಲುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಗ್ರಾಹಕರು. ಅಧುನಿಕ ಟಚ್ ನೀಡಿರುವ ಗುಜರಾತಿನ ಮಣ್ಣಿನ ವಸ್ತುಗಳು ಕೊಪ್ಪಳದ ಜನರ ಗಮನ ಸೆಳೆಯುತ್ತಿವೆ.