ಗಂಗಾವತಿ: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಬಿಟ್ಟು ಕೊಡಲು ಒಪ್ಪಿದ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಮೊದಲು ಬೆಡ್ ನೀಡಲು ಹಿಂದೇಟು ಹಾಕಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ, ಕಾನೂನು ಕ್ರಮಕ್ಕೆ ಮುಂದಾಗಿ ನೋಂದಣಿ ರದ್ದು ಮಾಡಲು ಮುಂದಾಗುತ್ತಿದ್ದಂತೆ ಕೆಲ ಆಸ್ಪತ್ರೆಗಳು ಬೆಡ್ ನೀಡಲು ಮುಂದೆ ಬಂದಿವೆ.
ಬೆಡ್ ನೀಡಲು ಸಿದ್ಧವಿರುವ ಆಸ್ಪತ್ರೆಗಳಲ್ಲಿನ ವ್ಯವಸ್ಥೆ, ಗಾಳಿ-ಬೆಳಕು, ವಿದ್ಯುತ್, ಇತರ ರೋಗಿಗಳಿಗೆ ಇರುವ ಅಂತರ ಇತ್ಯಾದಿಗಳ ಪೂರಕ ಅಗತ್ಯತೆಗಳನ್ನು ಸಹಾಯಕ ಆಯುಕ್ತ ಹಾಗೂ ಡಿಹೆಚ್ಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.