ಕೋಲಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಜಿಲ್ಲೆಯ ನಾಯಕರು ಒಂದಾಗುವ ಮೂನ್ಸೂಚನೆ ನೀಡಿದ್ದಾರೆ. ತಮ್ಮ ಹಾಗೂ ಪಕ್ಷದ ಗೆಲುವಿಗಾಗಿ ಹಾವು-ಮುಂಗುಸಿಯಂತಿದ್ದ ನಾಯಕರು ಈಗ ಸಾಫ್ಟ್ ಆಗಿದ್ದಾರೆ. ತಮ್ಮ ಪ್ರತಿಷ್ಠೆ ಬದಿಗಿಟ್ಟು, ಜಗಳ ಮರೆತು ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಜಿಲ್ಲೆಯ ನಾಯಕರಲ್ಲಿನ ಮುನಿಸು ತಗ್ಗುವ ಮುನ್ಸೂಚನೆ ಸಿಕ್ಕಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಅತಿ ಕುತೂಹಲ ಕೆರಳಿಸುತ್ತಿರುವ ವಿಷಯ ಕೋಲಾರ ಕಾಂಗ್ರೆಸ್ಸ್ನ ಒಳ ಜಗಳ. ಈಗಾಗಲೇ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಹಾಗೂ ಮುನಿಯಪ್ಪ ಟಿಕೆಟ್ಗಾಗಿ ಅರ್ಜಿ ಸಲ್ಲಿಸುವ ವೇಳೆ ಕ್ಷೇತ್ರ ಯಾವುದು ಅನ್ನೋದನ್ನು ಖಾಲಿ ಬಿಟ್ಟಿದ್ದಾರೆ.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಕೋಲಾರ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ನಾಯಕರನ್ನು ಸೇರಿಸಿ ಸಭೆಗಳನ್ನು ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಗೆಲುವು ಕಷ್ಟ, ಕೋಲಾರ ಕಾಂಗ್ರೆಸ್ನಲ್ಲಿ ಗೊಂದಲ ಸಮಸ್ಯೆ ಇದೆ. ಅದನ್ನು ಸರಿಪಡಿಸಿಕೊಂಡು ಕೋಲಾರಕ್ಕೆ ಬಂದರೆ ಅನುಕೂಲ ಎಂದು ಸಿದ್ದರಾಮಯ್ಯಗೆ ಸಲಹೆ ಹಾಗೂ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.
ಅಲ್ಲದೇ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ನಲ್ಲಿ ಯಾರೂ ಸಂಚು ಮಾಡುತ್ತಿಲ್ಲ. ಆದರೆ, ಅವರು ಮೂಲ ಹಾಗೂ ಕಾಂಗ್ರೆಸ್ ನಿಷ್ಠರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕ ಸಿದ್ದರಾಮಯ್ಯ ಕೋಲಾರಕ್ಕೆ ಬಂದ್ರೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಸಿದ್ದು ಪರವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ, ಹಳೆಯ ಬೇಸರವನ್ನೆಲ್ಲಾ ಮರೆತಿದ್ದೇನೆ. ಆಗಿದ್ದು ಆಗೋಯ್ತು ಎನ್ನುವ ಮೂಲಕ ಹೊಂದಾಣಿಕೆಯ ಮಾತುಗಳನ್ನಾಡುತ್ತಿದ್ದಾರೆ ಕೆ ಹೆಚ್ ಮುನಿಯಪ್ಪ.
ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿಯಿಂದ ಕೋಲಾರ ರಾಜಕೀಯ ಸಮೀಕರಣ ಸಾಕಷ್ಟು ಬದಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಆಗಿರುವ ರಮೇಶ್ ಕುಮಾರ್ ಹಾಗೂ ಕೆ.ಎಚ್. ಮುನಿಯಪ್ಪ ಬಣ ಒಗ್ಗಟ್ಟಾಗಿ ಪೊಲಿಟಿಕಲ್ ಗೇಮ್ ಶುರು ಮಾಡುವ ದಿನಗಳು ಸಮೀಪಿಸುತ್ತಿವೆ. ಇಬ್ಬರು ನಾಯಕರಿಗೆ ಅನಿವಾರ್ಯ ಎನ್ನುವಂತೆ ತಾವು ಗೆಲ್ಲಬೇಕು, ತಮ್ಮ ಪಕ್ಷವನ್ನು ಗೆಲ್ಲಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಅನ್ನೋದು ಸದ್ಯ ಇಬ್ಬರು ರೆಬೆಲ್ ನಾಯಕರಿಗೆ ಅರ್ಥವಾಗಿದೆ.
ಎಂತಹದೇ ಸನ್ನಿವೇಶದಲ್ಲೂ ಒಟ್ಟಿಗೆ ಕೆಲಸ ಮಾಡೋಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟೋಣ ಅನ್ನೋ ಮೃದು ಮನಸ್ಥಿತಿ ಇಬ್ಬರು ನಾಯಕರಲ್ಲೂ ಕಾಣಿಸಿಕೊಂಡಿದೆ. ಅದರಂತೆ ಸಿದ್ದರಾಮಯ್ಯಗಾಗಿ ಜಿಲ್ಲೆಯ 2ನೇ ಪ್ರವಾಸದ ಸಿದ್ಧತೆಯಲ್ಲಿರುವ ರಮೇಶ್ ಕುಮಾರ್ ಬಣದ ನಾಯಕರು ಸಹ ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡುತ್ತೇವೆ ಎಂದಿದ್ದಾರೆ.
ಅಲ್ಲದೇ ಕೆ.ಹೆಚ್ ಮುನಿಯಪ್ಪ ಅವರ ಬಣವನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಅವರು ನಮ್ಮ ಜೊತೆಗೆ ಬರಲಿ, ನಾವು ಎಲ್ಲವನ್ನು ಮರೆತಿದ್ದೇವೆ ಎನ್ನುತ್ತಿದ್ದಾರೆ ರಮೇಶ್ ಕುಮಾರ್.
ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರನ್ನು ಮನೆಗೆ ಕಳಿಸುತ್ತೇವೆ: ಸಿಎಂ ಬೊಮ್ಮಾಯಿ