ಕೋಲಾರ : ಅನರ್ಹ ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿ ಸ್ವಲ್ಪ ಬೇಜಾರಾಗಿ, ನಾನಾ ತೊಂದರೆ ಹಿಂಸೆಗಳನ್ನು ಅನುಭವಿಸಿ ಪಕ್ಷ ಬಿಟ್ಟು ಬಂದಿದ್ದಾರೆ. ಮುಂಬೈಯಲ್ಲಿ ನಾನು ಜೊತೆಯಲ್ಲಿದ್ದಾಗ ನನ್ನ ಬಳಿಯೂ ನೋವು ಹೇಳಿಕೊಂಡಿದ್ದಾರೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ರು.
ಕೋಲಾರ ತಾಲೂಕಿನ ಕೆಂಬೋಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅನರ್ಹರನ್ನ ಕಳಂಕಿತರು ಎಂದಿದ್ದಾರೆ. ಆದ್ರೆ, ಅನರ್ಹ ಶಾಸಕರದು ಒಬ್ಬೊಬ್ಬರದು ಒಂದೊಂದು ಕಥೆ. ನನ್ನ ಅದೃಷ್ಟ ನಾನು ಅನರ್ಹವಾಗಲಿಲ್ಲ. ನನಗೆ ಒಂದು ರೀತಿ ಮರು ಹುಟ್ಟು ಸಿಕ್ಕಿದೆ. ಆದ್ರೆ ಪಕ್ಷೇತರ ಶಾಸಕ ಶಂಕರ್ ಅನರ್ಹವಾಗಿರುವುದು ಬೇಜಾರಾಗಿದೆ ಎಂದ್ರು.
ನಮ್ಮ ತಾತನ ಕಾಲದಲ್ಲಿ ಒಂದೇ ಪಕ್ಷ, ಸಿದ್ದಾಂತ ಇತ್ತು. ಪಕ್ಷಾಂತರ ಅನ್ನೋದು ಮಾಮೂಲಿಯಾಗಿದೆ. ನಮ್ಮನ್ನು ಅಂದು ನಡೆಸಿಕೊಂಡ ವಿಧಾನ ಹಾಗೂ ಬೇರೆಯವರ ಹಸ್ತಕ್ಷೇಪದಿಂದ ಪಕ್ಷಾಂತರ ನಡೆಯಿತು ಎಂದು ಸರ್ಕಾರ ಉರುಳಿಸಿದ ಕಾರಣವನ್ನ ನಾಗೇಶ್ ಬಿಚ್ಚಿಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಗೆಲ್ಲೋದು ಅನಿವಾರ್ಯ, ಸರ್ಕಾರ ಸ್ಥಿರವಾಗಿರಬೇಕಾದ್ರೆ ಗೆಲ್ಲೋದು ಮುಖ್ಯ, ಜನ ಕೂಡ ಬಿಜೆಪಿ ಪರವಾಗಿದ್ದಾರೆ ಎಂದರು.
ದಿನಕ್ಕೊಂದು ನಿಲುವಿನ ಮೂಲಕ ಗೊಂದಲ ಸೃಷ್ಟಿಸುತ್ತಿರುವ ಜೆಡಿಎಸ್ಗೆ ತಿರುಗೇಟು ನೀಡಿದ ಅಬಕಾರಿ ಸಚಿವ ನಾಗೇಶ್, ಈ ಕಾಲದಲ್ಲಿ ಯಾರನ್ನೂ ನಂಬಬಾರದು. ನಿಯತ್ತಾಗಿ ಕೆಲಸಮಾಡಿ ಅವರ ಸ್ವಂತ ವರ್ಚಸ್ಸಿನಿಂದ ಗೆದ್ದು ಬರಲಿ ಎಂದು ಹೇಳಿದ್ರು. ಅಲ್ಲದೆ ನಾನು ಕೂಡ ಉಪ ಚುನಾವಣೆಯಲ್ಲಿ ನನ್ನ ಸ್ನೇಹಿತರ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡುವೆ ಎಂದರು.