ಕೋಲಾರ : ಸಿದ್ದರಾಮಯ್ಯ ಐದಾರು ಜನ ಅಡ್ವೈಸರ್ಸ್ಗಳನ್ನ ಇಟ್ಟುಕೊಂಡು, ದಿನಕ್ಕೆ ಒಬ್ಬೊಬ್ಬರಂತೆ ಅವರು ಏನು ಹೇಳಿಕೆ ಕೊಡುತ್ತಾರೋ ಅದನ್ನ ಹೇಳುತ್ತಾರೆ ಎಂದು ಕೋಲಾರದಲ್ಲಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಇಂದು ಕೋಲಾರದಲ್ಲಿ ರಾಮ ಮಂದಿರ ಉದ್ಘಾಟನೆ ನಂತರ ನಾನೂ ಸಹ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಸ್ವಂತ ಬುದ್ದಿ ಇಲ್ಲ ಎಂದು ನನಗೆ ಅನಿಸುತ್ತಿದೆ. ವಯಸ್ಸಾದ ಮೇಲೆ ಈ ರೀತಿ ಆಗಿದ್ದಾರೆ. ಅವರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಹೀಗಾಗಿ ಅವರು ಒಳ್ಳೆಯ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
135 ಸೀಟುಗಳು ಗೆದ್ದಿದ್ದರೂ ಸಹ ಅವರು ಅಧಿಕಾರಕ್ಕೆ ಬಂದಾಗಿನಿಂದ ಭಯದಲ್ಲೇ ಇದ್ದಾರೆ. ಇನ್ನು ನಾವೇನೂ ಪ್ರಯತ್ನಗಳನ್ನ ಮಾಡುತ್ತಿಲ್ಲ. ಆದರೆ ಯಾವತ್ತು ನಮ್ಮ ಸರ್ಕಾರ ಬೀಳುತ್ತೊ ಎಂದು ಭಯದಲ್ಲಿಯೇ ಇದ್ದಾರೆ. ಕಾರಣ ಅವರ ಸುತ್ತ ಇರುವಂತಹ ನಕ್ಷತ್ರ ಫಲಗಳು ಆ ರೀತಿ ಇವೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರಿಗೆ ರಾಮನ ಭಯ ಯಾವಾಗಲೂ ಇದೆ. ಮೊದಲು ತಿಲಕ ಇಡಲು ಬಿಡುತ್ತಿರಲಿಲ್ಲ. ಕೇಸರಿ ಶಾಲೂ ಹಾಕಲು ಹೋದರೆ ಕಿತ್ತು ಬಿಸಾಡುತ್ತಿದ್ರು. ಆದರೆ ಈಗ ಎಲ್ಲವನ್ನೂ ಹಚ್ಚಿಕೊಳ್ಳುತ್ತಾರೆ ಎಂದು ಹೇಳಿದ್ರು. ಇನ್ನು ರಾಮ ನನ್ನ ಹೆಸರಿನಲ್ಲೇ ಇದಾನೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಆದರೆ ಆ ರಾಮ ನಿನ್ನ ಹೆಸರಲ್ಲಿ ಇರಲು ಸಾಧ್ಯನಾ? ರಾಮನ ಗುಣ ನಿನ್ನಲ್ಲಿ ಬರಲು ಸಾಧ್ಯನಾ? ಎಂದು ಪ್ರಶ್ನೆ ಮಾಡಿದರು.
ಓಟ್ ಬ್ಯಾಂಕ್ಗಾಗಿ ರಾಮಮಂದಿರ ನಿರ್ಮಾಣ ಮಾಡಿರುವುದಲ್ಲ. ಇದು ಬಿಜೆಪಿಯ ಅಜೆಂಡಾ ಕೂಡ ಆಗಿತ್ತು ಎಂದರು. ಜೊತೆಗೆ ಅವತ್ತು ಶಪಥ ಮಾಡಿ ಜನರಿಗೆ ವಿಶ್ವಾಸ ನೀಡಿದ್ದೆವು. ಹೀಗಾಗಿ ಮಂದಿರ ನಿರ್ಮಾಣ ಮಾಡಿದೆವು ಎಂದರು.
ಇದನ್ನೂ ಓದಿ: ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಲ್ಲಿ ರಾಮಮಂದಿರ ಇತಿಹಾಸದ ಕೋರ್ಸ್ ಆರಂಭ
ಅಯೋಧ್ಯಾಕ್ಕೆ ಹೋಗುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು: ನಾನು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಅವರು ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. "ಬಿಜೆಪಿಯವರು ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ನಮ್ಮದೇನೂ ವಿರೋಧ ಇಲ್ಲ. 22ರಂದು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ, ಇದು ಸರಿಯಲ್ಲ" ಎಂದು ಟೀಕಾ ಪ್ರಹಾರ ನಡೆಸಿದ್ದರು.
"ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿರುವುದನ್ನು ವಿರೋಧ ಮಾಡುತ್ತೇವೆಯೇ ಹೊರತು ಶ್ರೀರಾಮಚಂದ್ರ, ರಾಮಮಂದಿರವನ್ನಾಗಲಿ ನಾವು ವಿರೋಧ ಮಾಡಲ್ಲ. ನಾನು ಅಯೋಧ್ಯೆಗೆ ಹೋಗಲ್ಲ ಎಂದೂ ಹೇಳಿಲ್ಲ. ಹೋಗುತ್ತೇನೆ ಎಂದೂ ಹೇಳಿಲ್ಲ" ಎಂದು ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದ್ದರು.