ಕೊಡಗು (ಮಡಿಕೇರಿ): ಮಾತಾಡೋಕೆ ಏನ್ರಿ, ಯಾರ್ ಏನ್ ಬೇಕಾದ್ರು ಮಾತಾಡಬಹುದು. ಮೂಳೆ ಇಲ್ಲದ ನಾಲಿಗೆ ಅಲ್ವಾ? ಮೊದಲು ವಾಸ್ತವದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಿಕೆಶಿ ಹೇಳಿಕೆ ವಿರುದ್ದ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.
ದಿವಂಗತ ಸುರೇಶ್ ಅಂಗಡಿ ಮೃತದೇಹ ಬೆಳಗಾವಿಗೆ ತರಬೇಕಿತ್ತು ಎನ್ನುವ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ರಾಷ್ಟ್ರ ಕಂಡ ಅಪರೂಪದ ವ್ಯಕ್ತಿತ್ವ ಇರುವವರು. ಅವರನ್ನೇ ಸಾರ್ವಜನಿಕ ದರ್ಶನಕ್ಕೆ ಇಡಲಾಗಲಿಲ್ಲ. ನಮ್ಮೆಲ್ಲರಿಗಿಂತ ದೇಶದ ಕಾನೂನೇ ದೊಡ್ಡದಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ನಾನೂ ಕೂಡ ಸುರೇಶ್ ಅಂಗಡಿ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ. ಹೀಗಾಗಿ ನಮ್ಮ ಸರ್ಕಾರ ಕಾನೂನನ್ನು ಪಾಲಿಸಿದೆ ಎಂದು ತಿಳಿಸಿದರು.