ಕೊಡಗು: ಸುಂದರ ಪ್ರಕೃತಿ ನಡುವೆ ಮಕ್ಕಳಿಗೆ ಭವ್ಯ ಭಾರತದ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಾಲೆಯ ಶಿಕ್ಷಕರು ಪ್ರಾತ್ಯಕ್ಷಿಕೆ ಮೂಲಕ ಸ್ವ ಅನುಭವಕ್ಕೆ ತರುತ್ತಿದ್ದಾರೆ.
ಶಾಲೆ ಎಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭೋದಿಸುವ ಪಠ್ಯ ಪ್ರವಚನಕ್ಕೂ ಹೊರತಾದದ್ದು ಎಂದು ನಂಬಿರುವ ಅವರು ಪೆನ್ನನ್ನು ಹಿಡಿಯುವ ಮಕ್ಕಳ ಕೈಯಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿವ ಅಭ್ಯರ್ಥಿಗಳ ಹಣೆ ಬರಹ ಬರೆಯುವ ಹೊಣೆಗಾರಿಕೆ ಕೊಟ್ಟಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾನಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನವೀನ್ ಹಾಗೂ ಮುಖ್ಯ ಶಿಕ್ಷಕ ಮಂಜೇಶ್ ಶಾಲೆಯ ಸಂಸತ್ತಿನ ಚುನಾವಣೆಯಲ್ಲಿ ಇವಿಎಂ ಮಷಿನ್ ಮಾದರಿ ಮೊಬೈಲ್ ಆ್ಯಪ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡ ಇವಿಎಂ ಆಪ್ ನಲ್ಲಿ ಮಕ್ಕಳ ಖಾತೆಯ ಹೆಸರು ಮತ್ತು ಫೋಟೋ ಹಾಕಿ ಶಿಕ್ಷಕರ ಮೊಬೈಲ್ ಬಳಸಿ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಆಯ್ಕೆಯ ಮಹತ್ವ ಹಾಗೂ ಚುನಾವಣೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಾ ಅವರ ಭೌದ್ಧಿಕ,ಸೃಜನ ಶೀಲತೆ, ಸಹಬಾಳ್ವೆ, ವಿನಯ, ವಿವೇಕ, ತರ್ಕ, ಧೈರ್ಯ ಮೊದಲಾದ ಗುಣಗಳನ್ನು ಪೋಷಿಸುವ ಹಾಗೂ ಚೇತೋಹಾರಿ ಕನಸುಗಳನ್ನು ಹುಟ್ಟುಹಾಕಲು ನಿರಂತರ ಪ್ರೇರೇಪಣೆ ಎನ್ನುವ ಶಾಲೆಯ ಧ್ಯೇಯ ವಾಕ್ಯದೊಂದಿಗೆ ಇದೀಗ ಮಕ್ಕಳಲ್ಲಿ ಇವಿಎಂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣೆಯ ವಾಸ್ತವ ಅನುಭವವನ್ನು ವಿದ್ಯಾರ್ಥಿಗಳಿಗೆ ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಶಾಲೆಯ ಮುಖ್ಯ ಶಿಕ್ಷಕರಾದ ಮಂಜೇಶ್.
ಹದಿನೆಂಟು ವರ್ಷದ ಬಳಿಕ ನಮಗೆ ಮತದಾನದ ಅವಕಾಶ ಸಿಗುತ್ತದೆ. ಇದೀಗ ನಮ್ಮ ಶಾಲೆಯ ಶಿಕ್ಷಕರು ನಮಗಾಗಿ ಹೊಸದೊಂದು ಆ್ಯಪ್ ಮೂಲಕ ಚುನಾವಣೆ ಹಾಗೂ ಇವಿಎಂ ಮತ ಯಂತ್ರದ ಬಗ್ಗೆ ಪ್ರಾಯೋಗಿಕ ಅನುಭವ ಕೊಡುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ಶಾಲೆಯ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತ ವಿದ್ಯಾರ್ಥಿ ಪ್ರತಾಪ ಶರ್ಮ.