ಕೊಡಗು: ಜಿಲ್ಲೆಯಲ್ಲಿ ಅತಿ ಹೆಚ್ಚು 25 ಮತದಾರರನ್ನು ಹೊಂದಿದ್ದ ಸಿದ್ದಾಪುರ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರರು ಮೊಬೈಲ್ ಬಳಕೆ ಮಾಡಿದ ಕಾರಣ ಕೆಲಕಾಲ ಗೊಂದಲ ಉಂಟಾಗಿತ್ತು. ನಂತರ ಪೊಲೀಸರ ಮಧ್ಯಪ್ರವೇಶದಿಂದ ಶಾಂತಿಯುತವಾಗಿ ಮತದಾನ ನಡೆದಿದೆ.
ಇಂದು ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತದಾನದ ಪ್ರಕ್ರಿಯೆ ಮುಗಿದಿದ್ದು, ಶೇ 99.70ರಷ್ಟು ಮತದಾನವಾಗಿದೆ. 687 ಮಹಿಳಾ ಮತದಾರರು, 638 ಪುರುಷ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಒಟ್ಟು 1,325 ಮತದಾರರಿಂದ ಹಕ್ಕು ಚಲಾವಣೆಯಾಗಿದೆ. ಇಬ್ಬರು ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಅಡಕವಾಗಿದೆ.
ಜಿಲ್ಲೆಯಲ್ಲಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಹಾಗೂ ರೆಸಾರ್ಟ್ ವಾಸ್ತವ್ಯ ಮಾಡುವುದರ ಮೂಲಕ ಮತದಾನ ನಡೆದಿದೆ. ಬಿಜೆಪಿ ಪಕ್ಷಕ್ಕೆ ಸೇರಿದ ಕೆಲ ಗ್ರಾಮ ಪಂಚಾಯಿತಿ ಸದಸ್ಯರನ್ನು ಹಣಕೊಟ್ಟು ರೆಸಾರ್ಟ್ ನಲ್ಲಿ ಇಟ್ಟು ಬೆಳಗ್ಗೆ ಕರೆತದ್ದು, ಮತದಾನ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಜಿಲ್ಲೆಯಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು, ನೇರ ಹಣಾಹಣಿ ಉಂಟಾಗಿದೆ. ಕಾಂಗ್ರೆಸ್ನಿಂದ ಮಂತರ್ ಗೌಡ ಹಾಗೂ ಬಿಜೆಪಿ ಪಕ್ಷದಿಂದ ಸುಜಾ ಕುಶಾಲಪ್ಪ ಸ್ಪರ್ಧಾ ಕಣದಲ್ಲಿದ್ದಾರೆ. ಎಂಪಿ ಪ್ರತಾಪ್ ಸಿಂಹ, ಶಾಸಕ ರಂಜನ್, ಎಂಎಲ್ಸಿ ವೀಣಾ ಅಚ್ಚಯ್ಯ ಮಡಿಕೇರಿಯ ನಗರ ಸಭೆಯಲ್ಲಿ ಮತ ಚಲಾಯಿಸಿದರು.
ಜಿಲ್ಲೆಯಲ್ಲಿ ಮತದಾನ ಪಾರದರ್ಶಕವಾಗಿ ನಡೆಯಲು ಮತಗಟ್ಟೆ ಸುತ್ತಮುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಡಿ.11ರ ಸಂಜೆ 4 ಗಂಟೆಯವರೆಗೆ ನಿಷೇದಾಜ್ಞೆ ಜಾರಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 108 ಮತಗಟ್ಟೆಗಳ ಇದ್ದು ಒಟ್ಟು 1,329 ಮತದಾರರಿದ್ದಾರೆ.
ಇದನ್ನೂ ಓದಿ : Live Updates: ಪರಿಷತ್ ಚುನಾವಣೆ - ಬೆಳಗಾವಿಯಲ್ಲಿ ಶೇ.99.97, ಧಾರವಾಡದಲ್ಲಿ ಶೇ.99.63 ರಷ್ಟು ಮತದಾನ