ಕೊಡಗು: ಕೊರೊನಾ ಮಹಾಮಾರಿ ದೇಶದ ಬಡವರು, ಕೂಲಿ ಕಾರ್ಮಿಕರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ಲಾಕ್ಡೌನ್ ಪರಿಣಾಮ ಕೂಲಿ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಜನರು ಪರಿತಪಿಸುವಂತ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಇಂಥದ್ದೇ ಮನಕಲಕುವ ಸ್ಥಿತಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹಂಚಿತ್ತಿಟ್ಟು ಗ್ರಾಮದಲ್ಲಿದೆ. ಇಲ್ಲಿನ ನಿವಾಸಿ ಶಾಂತಮ್ಮ, ಬೆನ್ನು ಮೂಳೆ ಮುರಿದುಕೊಂಡು 13 ವರ್ಷದಿಂದ ಹಾಸಿಗೆ ಹಿಡಿದಿರುವ ಮಗನನ್ನು ಕೂಲಿ ಮಾಡಿ ಸಾಕಿ ಸಲಹುತ್ತಿದ್ದರು.
ಕೂಲಿ ಹಣದಿಂದ ಮಗ ವಿಠ್ಠಲನಿಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆ ಕೂಲಿಯೂ ಇಲ್ಲದೆ ಮಗನಿಗೆ ಚಿಕಿತ್ಸೆ ಕೊಡಿಸಲು ಮಂಗಳೂರಿಗೆ ಕರೆದೊಯ್ಯಲೂ ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇತ್ತ ಸರಿಯಾಗಿ ದುಡಿಮೆಯೂ ಇಲ್ಲದೆ, ತಿನ್ನೋ ಅನ್ನಕ್ಕೂ ಹಾಹಾಕಾರ ಎದುರಾಗಿದೆ.
ಸರ್ಕಾರ ಕೊಟ್ಟಿರುವ ಕೇವಲ ಐದು ಕೆ.ಜಿ. ಅಕ್ಕಿಯಿಂದ ಏನು ಮಾಡಲು ಸಾಧ್ಯ. ಸೊಂಟ ಮುರಿದುಕೊಂಡು ನಡೆದಾಡಲು ಸಾಧ್ಯವಿಲ್ಲದೆ ಹಾಸಿಗೆ ಹಿಡಿದಿರುವ ಮಗನಿಗೆ ಗಂಜಿ ಹಾಕಿ ನಾನು ಹಸಿವಿನಿಂದಲೇ ಇರುತ್ತೇನೆ. ಇದರ ನಡುವೆ ಯಾರಾದರೂ ಕೂಲಿ ಕೆಲಸಕ್ಕೆ ಕರೆದರೆ, ಕೆಲಸಕ್ಕೆ ಕರೆದವರು ಏನಾದರೂ ಕೊಟ್ಟರೆ ಅದನ್ನು ತಿನ್ನುತ್ತೇನೆ ಎಂದು ಕಣ್ಣೀರು ಸುರಿಸುತ್ತಾರೆ ಇಳಿ ವಯಸ್ಸಿನ ಶಾಂತಮ್ಮ. ಹೀಗಾಗಿ ಸರ್ಕಾರ ಇಂತಹವರ ಕಡೆಗೆ ಗಮನಹರಿಸಿ, ಒಂದೊತ್ತಿನ ಊಟಕ್ಕಾದರೂ ದಾರಿ ಮಾಡಿಕೊಡಬೇಕಿದೆ.