ಕೊಡಗು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಇಂದು ರಾತ್ರಿ ಜಿಲ್ಲಾಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿ ಆಸ್ಪತ್ರೆ ಸಮಸ್ಯೆಗಳನ್ನು ಅರಿಯಲು ನಿರ್ಧರಿಸಿದ್ದಾರೆ.
ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ಸಂಜೆ 6 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದಾರೆ. ರೋಗಿಗಳ ಸಮಸ್ಯೆಗಳನ್ನು ಆಲಿಸಿ, ಅಧಿಕಾರಿಗಳ ಜೊತೆ ಸಭೆ ಹಾಗೂ ರೋಗಿಗಳಿಗೆ ನೀಡುತ್ತಿರುವ ಗುಣಮಟ್ಟ ಸೇವೆ ಕುರಿತಂತೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ಆಸ್ಪತ್ರೆಯ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ಸಚಿವರ ವಾಸ್ತವ್ಯಕ್ಕೆ ಕೊಡಗು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಿಂದ ತಯಾರಿ ನಡೆಸಲಾಗಿದೆ. ಆಸ್ಪತ್ರೆ ಊಟ ತಿಂಡಿ ಹಾಗೂ ಬೆಡ್ಗಳನ್ನೆ ಬಳಸಲಿದ್ದು, ಆಸ್ಪತ್ರೆಯ 3 ಕಡೆಗಳಲ್ಲಿ ಸಚಿವರ ವಾಸ್ತವ್ಯಕ್ಕೆ ತಯಾರಿ ನಡೆಸಲಾಗಿದೆ.
ರಾತ್ರಿ ಹಾಗೂ ಬೆಳಗ್ಗೆ ಆಸ್ಪತ್ರೆ ಊಟವನ್ನೇ ಬಳಸಲಿದ್ದಾರೆ. ಸಂಜೆ 7:30ಕ್ಕೆ ಅನ್ನ, ಸಾಂಬಾರ್ ಹಾಗೂ ಒಂದು ಮೊಟ್ಟೆ. ಬೆಳಗ್ಗೆ 6:00 ಗಂಟೆಗೆ ಕಾಫಿ ಬ್ರೆಡ್ ಸೇವಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹಾಲು, ಬಾಳೆಹಣ್ಣು ಸೇವಿಸಲಿದ್ದಾರೆ. ಸಚಿವರ ಭೇಟಿ ಹಿನ್ನೆಲೆಯಲ್ಲಿ ಸಿಬ್ಬಂದಿ ಆಸ್ಪತ್ರೆ ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಅಲ್ಲದೇ ಸಚಿವರು ವಾಸ್ತವ್ಯ ಹೂಡುವ ವಾರ್ಡಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.