ಕಲಬುರಗಿ : ರಾಜ್ಯದಲ್ಲಿ ಕೊರೊನಾ ತಡೆಗಟ್ಟುವಲ್ಲಿ ಯಡಿಯೂರಪ್ಪನವರು ವಿಫಲರಾಗಿದ್ದು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಲಬುರಗಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್, ಯೂರಪ್ಪನವನವರಿಗೆ ತಲೆ ಕೆಟ್ಟಿದೆ, ಗೌರವ ಇದ್ದರೆ ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಕೊರೊನಾದಿಂದ ಪ್ರತಿದಿನ 150 ಜನ ಸಾಯುತ್ತಿದ್ದಾರೆ. ಆದರೆ, ಕೊರೊನಾ ನಿಯಂತ್ರಣದ ಬಗ್ಗೆ ತೆಲೆಕೆಡಿಸಿಕೊಳ್ಳದ ಯಡಿಯೂರಪ್ಪನವರ ಸರ್ಕಾರ, ಎಲ್ಲವನ್ನು ಕೈಚೆಲ್ಲಿ ಕುಳಿತಿದೆ. ಸಾಯುವವರು ಸಾಯಲಿ, ಬದುಕುವವರು ಬದುಕಲಿ, ನನ್ನ ಪಾಡಿಗೆ ನಾನಿರುತ್ತೇನೆ ಅನ್ನೋದಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ-ಕಾಲೇಜು ಆರಂಭದಲ್ಲಿ ಹುಡುಗಾಟಿಕೆ ಬೇಡ!
ರಾಜ್ಯ ಸರ್ಕಾರ ಶಾಲಾ-ಕಾಲೇಜು ಆರಂಭಕ್ಕೆ ಚಿಂತನೆ ನಡೆಸಿದ್ದು ಸರಿಯಾದ ವಿಚಾರ ಅಲ್ಲ. ಇದರಿಂದ ಮಕ್ಕಳಿಗೂ ಕೊರೊನಾ ಹರಡುವ ಸಾಧ್ಯತೆ ಇರುತ್ತೆ. ಪ್ರಾಣ ಇದ್ರೆನೇ ವಿದ್ಯೆ. ವಿದ್ಯೆ ಎಲ್ಲರಿಗೂ ಬೇಕು. ಆದರೆ, ಪ್ರಾಣಕ್ಕಿಂತ ವಿದ್ಯೆ ಮುಖ್ಯವಲ್ಲ. ಸದ್ಯಕ್ಕೆ ಶಾಲಾ-ಕಾಲೇಜು ಆರಂಭ ಬೇಡವೇ ಬೇಡ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಹುಡುಗಾಟಿಕೆ ಮಾಡಬಾರದು. ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳು ಯಮಲೋಕ... ವೈದ್ಯರು ಯಮಧರ್ಮ...!
ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ಯಮಲೋಕವಾಗಿ ಮಾರ್ಪಟ್ಟಿವೆ, ವೈದ್ಯರು ಯಮಧರ್ಮರಂತೆ ಕಾಣುತ್ತಿದ್ದಾರೆ. ಕೋವಿಡ್ ಹೆಸರಿನಲ್ಲಿ ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳು ವಸೂಲಿಗೆ ಇಳಿದಿವೆ. ಅವರನ್ನು ಕೇಳುವವರು ಇಲ್ಲ, ಹೇಳುವವರು ಇಲ್ಲದಾಗಿದೆ. ಇದೆಲ್ಲವನ್ನು ತಡೆಯಬೇಕಾದವರು ಯಾರು? ಎಂದು ಆಳುವ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.