ಕಲಬುರಗಿ: ಶಾಲಾಪೂರ್ವ ಹಾಗೂ ಶಾಲಾ ಶಿಕ್ಷಣದ ಕುರಿತು ನೂತನ ಶಿಕ್ಷಣ ನೀತಿ ಹೇಳುವುದೇನು ಎಂಬ ವಿಷಯದ ಕುರಿತು ಕಲ್ಬುರ್ಗಿಯಲ್ಲಿ ದುಂಡು ಮೇಜಿನ ಸಭೆ ನಡೆಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ್ ಗಾಜನೂರು, ಪ್ರೋ. ಅಪ್ಪಗೇರೆ ಸೋಮಶೇಖರ್ ಸೇರಿದಂತೆ ಅನೇಕ ಹೋರಾಟಗಾರರು ಹಾಗೂ ಶೈಕ್ಷಣಿಕ ಚಿಂತಕರು ಭಾಗವಹಿಸಿದ್ದರು.
ದುಂಡು ಮೇಜಿನ ಸಭೆಯಲ್ಲಿ ಎಂಇಪಿ ಶಿಕ್ಷಣ ನೀತಿಯ ಸಂವಿಧಾನದ ಮೂಲ ತತ್ವ, ನೆರೆಹೊರೆ ಶಾಲಾ ವ್ಯವಸ್ಥೆ, ಸಮಾನ ಶಿಕ್ಷಣ ಪದ್ಧತಿ ಸೇರಿದಂತೆ ಶಿಕ್ಷಣ ಸಂಬಂಧಿ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
ಒಕ್ಕೂಟ ರಾಷ್ಟ್ರವಾದ ಭಾರತದಲ್ಲಿ ಮುಂದಿನ ಹಲವು ದಶಕಗಳ ಕಾಲ ಶಿಕ್ಷಣ ನೀತಿಯನ್ನು ನಿರ್ಧರಿಸುವಂತಹ ಅತ್ಯಂತ ಮಹತ್ವದ ದಾಖಲೆಯನ್ನು ಕೇಂದ್ರ ಸರ್ಕಾರ ಯಾವುದೇ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯದೆ ಅಪ್ರಜಾಸತ್ತಾತ್ಮಕ ವಿಧಾನದಲ್ಲಿ ಅಂಗೀಕರಿಸಿರುವ ರೀತಿಯ ಕುರಿತು ಚರ್ಚಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ, ಭಾರತ್ ವಿದ್ಯಾರ್ಥಿ ಫೆಡರೇಶನ್ ರಾಜ್ಯಾಧ್ಯಕ್ಷ ಅಂಬರೀಶ್ ಕಡಗದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ಶಿವಶರಣಪ್ಪ, ಮುಖಂಡರಾದ ಗೌರಮ್ಮ ಪಾಟೀಲ್, ಶರಣಬಸಪ್ಪ ಮಮಶೆಟ್ಟಿ, ಸಿದ್ದಲಿಂಗ್ ಪಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.