ಕಲಬುರಗಿ: ಸಹಕಾರ ಕೇಂದ್ರಗಳಲ್ಲಿರುವ ಸದಸ್ಯರು ಸಹಕಾರಿಗಳಾಗುವ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಅದನ್ನು ತಮ್ಮ ಜವಾಬ್ದಾರಿ ಎಂದು ಭಾವಿಸಿ ದಕ್ಷತೆ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಸಹಕಾರಿಗಳಾಗುವುದರ ಬದಲಿಗೆ ಬಂಡವಾಳ ಶಾಹಿಗಳಾಗುವುದಕ್ಕೆ ಮುಂದಾಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್ನ ಮುಖ್ಯ ಕಚೇರಿ ಹಾಗೂ ಶಾಖೆಗಳ ನೂತನ ಕಟ್ಟಡ ಶಿಲಾನ್ಯಾಸ ಹಾಗೂ ಮೈಕ್ರೋ/ಎಟಿಎಂ ವಾಹನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಹಕಾರ ಕೇಂದ್ರಗಳ ಬ್ಯಾಂಕ್ಗಳ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚ್ಯವಾಗಿ ಹೇಳಿದರು. ಸಿಎಂ ಬೊಮ್ಮಾಯಿ ಅವರು ಸಹಕಾರಿ ರಂಗದ ಬೆಳವಣಿಗೆಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲಿದೆ. ಎಲ್ಲ ರಂಗಗಳಲ್ಲಿಯೂ ಸಹಕಾರಿ ರಂಗ ಬೆಳೆಯುವುದಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಜನರ ಜೀವನದಲ್ಲಿ ಸಹಕಾರ ರಂಗ ಹಾಸುಹೊಕ್ಕಾದಂತೆ ನಮ್ಮಲ್ಲಿಯೂ ಹಾಸುಹೊಕ್ಕಾಗಬೇಕು ಎಂದು ಸಿಎಂ ಹೇಳಿದರು. ಸಾಮಾನ್ಯರಿಗೆ ಸಹಕಾರ ಬ್ಯಾಂಕ್ಗಳಲ್ಲಿ ಸಿಗುವ ಸಾಲ ಮತ್ತಿತರ ಸೌಲಭ್ಯಗಳು ಶೆಡ್ಯೂಲ್ಡ್ ಬ್ಯಾಂಕುಗಳಲ್ಲಿ ಸಿಗುವುದಿಲ್ಲ. ಈ ರಂಗ ಸಂಪೂರ್ಣ ವಿಶೇಷ ಎಂದರು.
ಇದನ್ನೂ ಓದಿ: ಆಪರೇಷನ್ ವೀರಪ್ಪನ್, ಮೃತಪಟ್ಟ ಪೊಲೀಸ್ ಪೇದೆ ಮಗನಿಗೆ ನೌಕರಿ ನೀಡದ ಸರ್ಕಾರ: ಹೈಕೋರ್ಟ್ನಿಂದ ನೋಟಿಸ್
ಎಲ್ಲ ರಂಗಗಳಲ್ಲಿಯೂ ಸಹಕಾರ ರಂಗ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಸಹಕಾರ ಮಂತ್ರಿಗಳನ್ನಾಗಿ ಮಾಡಿದ್ದಾರೆ. ಶೀಘ್ರದಲ್ಲಿಯೇ ದೇಶದ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದರು. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಣೆ ಶ್ಲಾಘಿಸಿದ ಸಿಎಂ:
ಒಂದು ವರ್ಷದ ಹಿಂದೆ ಸಂಪೂರ್ಣ ಚಲನಶೀಲತೆ ಕಳೆದುಕೊಂಡಿದ್ದ ಕಲಬುರಗಿ-ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್ ಅಚ್ಚರಿ ಎನ್ನುವ ರೀತಿಯಲ್ಲಿಯೇ ಬೆಳೆದುನಿಂತಿದೆ. ಅದರ ಕಾರ್ಯನಿರ್ವಹಣೆ ಅತ್ಯಂತ ಶ್ಲಾಘನೀಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಒಂದು ವರ್ಷದಲ್ಲಿ 1.26 ಲಕ್ಷ ರೈತರಿಗೆ 500ಕೋಟಿ ರೂ. ಸಾಲ ನೀಡಿದೆ. ಬರುವ ಮಾರ್ಚ್ವೊಳಗೆ ಇನ್ನೂ ಒಂದು ಲಕ್ಷ ರೈತರಿಗೆ 500 ಕೋಟಿ ರೂ. ಸಾಲ ನೀಡಲು ಉದ್ದೇಶಿಸಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.