ಸೇಡಂ (ಕಲಬುರ್ಗಿ): ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಕೋವಿಡ್ ಕುರಿತ ಜನ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಪಿಐ ರಾಜಶೇಖರ ಹಳಗೋದಿ ನೇತೃತ್ವದಲ್ಲಿ ವಯಸ್ಕರು ಮತ್ತು ಮಕ್ಕಳಿಗೆ ಮಾಸ್ಕ್ ತೊಡಿಸಲಾಯಿತು. ಪಿಎಸ್ಐ ಸುಶೀಲ್ ಕುಮಾರ್ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದರು.
ಕೊರೊನಾ ಮಹಾಮಾರಿಯಿಂದ ಬಚಾವಾಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸುತ್ತಿರಬೇಕು. ಇದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿ ಸಂಚರಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಇದೇ ವೇಳೆ ರೈಲ್ವೇ ನಿಲ್ದಾಣದ ಬಳಿಯಿದ್ದ ನಿರ್ಗತಿಕರು, ಭಿಕ್ಷುಕರಿಗೂ ಸಹ ಮಾಸ್ಕ್ ವಿತರಿಸಲಾಯಿತು.
ತಹಶೀಲ್ದಾರ್ ಬಸವರಾವ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಸ್ ಗುಡ್ಡೆ, ಪುರಸಭೆ ಸಿಬ್ಬಂದಿ ಹಾಗು ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.