ಕಲಬುರಗಿ : ಪ್ರವಾಹದಿಂದ 35,000 ಕೋಟಿ ರೂ. ಹಾನಿಯಾಗಿದೆ ಎಂದು ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ₹1,860 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇದು ಪರಿಹಾರ ಬಿಡುಗಡೆ ಮಾಡುವ ರೀತಿನಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಲಬುರಗಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ರೆ ಡಬಲ್ ಎಂಜಿನ್ ಸರ್ಕಾರ ಇದ್ದಂತೆ, ದೇಶ ಅಭಿವೃದ್ದಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಪರಿಹಾರ ಬಿಡುಗಡೆಯಲ್ಲಿ ಅನ್ಯಾಯ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (J) ಅಡಿಯಲ್ಲಿ ಯುವಕರಿಗೆ ಸಿಗುತ್ತಿದ್ದ ಉದ್ಯೋಗ ನಿಲ್ಲಿಸಿದ್ದಾರೆ. ವಾರ್ಷಿಕ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಒದಗಿಸಬೇಕಿದ್ದ₹1,500 ಕೋಟಿಯಲ್ಲಿ 1,134 ಕೋಟಿ ರೂ.
ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಬಿಡುಗಡೆ ಮಾಡಿದ್ದು ಕೇವಲ 250 ಕೋಟಿ ರೂ. ಮಾತ್ರ. ಇದನ್ನು ಅಭಿವೃದ್ಧಿ ಎನ್ನಬೇಕಾ? ಡಬಲ್ ಎಂಜಿನ್ ಎಲ್ಲಿದೆ? ಒಂದು ಎಂಜಿನ್ ಕೂಡ ಕೆಲಸ ಮಾಡುತ್ತಿಲ್ಲ. ಎಂಜಿನ್ ಫೇಲಾಗಿದೆ ಎಂದು ಹೇಳಿದರು.
ಒಂದಿಂಚೂ ಜಾಗ ಕೊಡಲ್ಲ..!
ಮಹಾರಾಷ್ಟ್ರ ಸಿಎಂ ಹೇಳಿಕೆ ಕುರಿತು ಕಾಂಗ್ರೆಸ್ ಮೃದು ಧೋರಣೆ ಹೊಂದಿದೆಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಮೃದ ಧೋರಣೆ ಹೊಂದಿಲ್ಲ. ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರಕ್ಕೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ ಎಂದರು.
ಉಪ ಚುನಾವಣೆ ಆಕಾಂಕ್ಷಿಗಳ ಸಭೆ
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷೆ ಹೊಂದಿರುವವರ ಸಭೆಯನ್ನು ಇದೇ ತಿಂಗಳು 20 ರಂದು ಕರೆದಿದ್ದೇನೆ. ಅಂದು ನನ್ನ ವರದಿಯನ್ನು ಹೈಕಮಾಂಡ್ಗೆ ಕಳಿಸುತ್ತೇನೆ ಎಂದರು.
ಹೆಚ್ಡಿಕೆಗೆ ಒಳ್ಳೆಯದಾಗಲಿ..!
ನನಗೆ ಸಂಪೂರ್ಣ ಬಹುಮತ ಕೊಡಿ ಪಂಚರತ್ನ ಸರ್ಕಾರ ಕೊಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರಲ್ಲ? ಅವರಿಗೆ ಒಳ್ಳೆಯದಾಗಲಿ ಎಂದು ಚುಟುಕಾಗಿ ಉತ್ತರಿಸಿದರು.