ಕಲಬುರಗಿ: ವಿದ್ಯೆ ಕಲಿಸುವ ಗುರುಗಳು ದೇವರಿಗೆ ಸಮಾನ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಕಲಬುರಗಿಯಲ್ಲಿ ನಿವೃತ್ತಿ ಹಿನ್ನೆಲೆ ಶಾಲೆಯ ನೆಚ್ಚಿನ ಶಿಕ್ಷಕ ಬಿಟ್ಟು ಹೋಗುತ್ತಿರುವುದನ್ನು ಅರಗಿಸಿಕೊಳ್ಳದ ಮಕ್ಕಳು ಗಳಗಳನೇ ಕಣ್ಣೀರು ಹಾಕಿದ್ದಾರೆ.
ನೆಚ್ಚಿನ ಗುರುವನ್ನು ಅಪ್ಪಿಕೊಂಡು 'ನಮ್ಮನ್ನು ಬಿಟ್ಟು ಹೋಗಬೇಡಿ ಸರ್' ಅಂತ ಮಕ್ಕಳು ಅಳುತ್ತಿರುವ ದೃಶ್ಯ ಕಂಡುಬಂದಿದ್ದು, ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ. ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ ಚಿಕ್ಕಬೋನಾರ ನಿವೃತ್ತರಾದ ಹಿನ್ನೆಲೆ ಮಕ್ಕಳು ಬೇಸರಗೊಂಡಿದ್ದಾರೆ.

ಬಸವರಾಜ ಅವರು ತಮ್ಮ ವೃತ್ತಿಜೀವನದ ಬಹುತೇಕ ಸಮಯವನ್ನು ಭೀಮಳ್ಳಿ ಗ್ರಾಮದಲ್ಲಿಯೇ ಕಳೆದಿದ್ದಾರೆ. ಅವರಲ್ಲಿನ ಸೌಮ್ಯ ಸ್ವಭಾವ, ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುವ ಮನಸ್ಸು, ಆಟದೊಂದಿಗೆ ಪಾಠ, ಪಾಠದೊಂದಿಗೆ ಸಮಾಜಕ್ಕೆ ಮಾದರಿಯಾಗಿ ಬದುಕುವ ಸಂಸ್ಕೃತಿ ಹೇಳಿಕೊಡುವ ಮೂಲಕ ಮಕ್ಕಳ ಮನಸ್ಸು ಗೆದ್ದವರು.
ಇದನ್ನೂ ಓದಿ: ಸರ್ವಧರ್ಮ ಸಮನ್ವಯತೆ ಸಾರುವ ಗಣೇಶೋತ್ಸವ.. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಹಬ್ಬ ಆಚರಣೆ
ಸರ್ಕಾರಿ ನಿಯಮದ ಪ್ರಕಾರ ಇದೀಗ ಬಸವರಾಜ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆ ಗ್ರಾಮದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮಸ್ಥರು ಶಿಕ್ಷಕ ಬಸವರಾಜ ಚಿಕ್ಕಬೋನಾರ ಅವರನ್ನು ಸನ್ಮಾನಿಸಿ ಗುಣಗಾಣ ಮಾಡಿದರು.