ಕಲಬುರಗಿ : ಹಳ್ಳಿಯ ಮುಗ್ಧಜನರನ್ನು ವ್ಯಸನಮುಕ್ತರನ್ನಾಗಿಸಲು ಅಫಜಲಪುರ ಪಟ್ಟಣದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದ ಸ್ವಾಮೀಜಿಗಳಾದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಜೋಳಿಗೆ ತೊಟ್ಟಿದ್ದಾರೆ. ಈ ಮೂಲಕ ಹಲವು ಹಳ್ಳಿಗಳಿಗೆ ಸುತ್ತಾಡಿ ಜನರಲ್ಲಿ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಮದ್ಯಪಾನ, ಸಿಗರೇಟ್ ಇತ್ಯಾದಿಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಕ್ಯಾನ್ಸರ್ ಮುಂತಾದ ಮಾರಕ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಇಂತಹ ವ್ಯಸನಿಗಳ ಮನಪರಿವರ್ತನೆಗೆ ಜೋಳಿಗೆ ತೊಟ್ಟಿರುವುದಾಗಿ ಸ್ವಾಮೀಜಿ ಹೇಳಿದರು.
ಇನ್ನು ಪ್ರತಿ ಗ್ರಾಮಕ್ಕೆ ತೆರಳಿ ಜನರ ಮನಪರಿವರ್ತನೆಗೆ ಪ್ರಯತ್ನ ಪಡಲಾಗುತ್ತಿದೆ. ಅಲ್ಲದೇ ಜನರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಶ್ರೀಗಳ ಜೋಳಿಗೆಗೆ ತಂಬಾಕು, ಗುಟ್ಕಾ, ಸಿಗರೇಟು ಮುಂತಾದ ವಸ್ತುಗಳನ್ನು ಹಾಕಿ ದುಶ್ಚಟದಿಂದ ದೂರ ಉಳಿಯುವುದಾಗಿ ಪ್ರಮಾಣ ಮಾಡುತ್ತಿದ್ದಾರೆ.
ಇಂದು ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ 'ಸದ್ಭಾವನ ಪಾದಯಾತ್ರೆ' ನಡೆಸಲಾಯಿತು. ಇಲ್ಲಿ ದುಶ್ಚಟಗಳ ಭಿಕ್ಷೆ. ಸದ್ಗುಣಗಳ ದೀಕ್ಷೆ ಆರಂಭಿಸಿದ ಶ್ರೀಗಳು ಸ್ವಯಂಪ್ರೇರಿತವಾಗಿ ದುಶ್ಚಟಗಳನ್ನು ಬಿಟ್ಟವರಿಗೆ ಲಿಂಗ ದೀಕ್ಷೆ ನೀಡಿದರು. ಈ ಸದ್ಭಾವನ ಪಾದಯಾತ್ರೆಯು 23 ದಿನಗಳ ಕಾಲ 118 ಹಳ್ಳಿಗಳಲ್ಲಿ ಸಂಚಾರ ಮಾಡಲಿದೆ.
ಈ ಯಾತ್ರೆಯನ್ನು ಲಿಂಗೈಕ್ಯ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಜನ್ಮಶತಮಾನೋತ್ಸವದ ನಿಮಿತ್ತ ಜನರಲ್ಲಿನ ದುಶ್ಚಟಗಳನ್ನು ಬಿಡಿಸಿ ಸದ್ಗುಣಗಳನ್ನು ಹೆಚ್ಚಿಸಲು ಆರಂಭಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು. ಶ್ರೀಗಳ ಸಮಾಜಮುಖಿ ಕಾರ್ಯಕ್ಕೆ ಜನರಿಂದ ವ್ಯಾಪಕ ಬೆಂಬಲ ಕೂಡಾ ವ್ಯಕ್ತವಾಗಿದೆ.
ಇದನ್ನೂ ಓದಿ : ಸರ್ಕಾರಿ ಶಾಲೆಯ ಉಳಿವಿಗೆ ದೇಣಿಗೆ ಸಂಗ್ರಹ: ಮಕ್ಕಳ ಭವಿಷ್ಯಕ್ಕೆ ಬೆಳಕಾದ ಅಕ್ಷರ ಜೋಳಿಗೆ