ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ತೊಗರಿ ನಾಡು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಡಗರ, ಸಂಭ್ರಮ, ವೈಭವ ಕಳೆಗಟ್ಟಿದೆ. ಶುಕ್ರವಾರದಿಂದ ಮೂರು ದಿನ ಜರುಗುತ್ತಿರೋ ಕಲ್ಯಾಣ ಉತ್ಸವದಲ್ಲಿ ಕಲೆ, ಸಾಹಿತ್ಯ ಮೇಳೈಸಿತು. ಖ್ಯಾತ ಗಾಯಕರಾದ ವಿಜಯಪ್ರಕಾಶ್, ಅನುರಾಧಾ ಭಟ್, ಸಲೀಂ ಸುಲೇಮಾನ್ ಸಂಗೀತ ರಸಸಂಜೆಗೆ ಕಲಬುರಗಿ ಜನ ದಿಲ್ ಖುಷ್ ಆಗಿದ್ದು ಕುಣಿದು ಸಂಭ್ರಮಿಸಿದರು.
ದೀಪ ಬೆಳಗಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ: ಹೌದು, ಕಲ್ಯಾಣ ನಾಡಿನ ಕಲೆ, ಸಾಹಿತ್ಯ, ಇತಿಹಾಸ ಸಾರುವ ಕಲ್ಯಾಣ ಕರ್ನಾಟಕ ಉತ್ಸವ ತೊಗರಿ ಕಣಜ ಕಲಬುರಗಿಯಲ್ಲಿ ಸಡಗರ - ಸಂಭ್ರಮ ಕಳೆಗಟ್ಟಿದೆ. ಗುಲ್ಬರ್ಗಾ ವಿಶ್ವ ವಿದ್ಯಾಲಯ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಕಲ್ಯಾಣ ಉತ್ಸಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ರಾಷ್ಟ್ರಕೂಟರ, ಬಹಮನಿ ಕೋಟೆ ಶಿಲ್ಪಕಲೆ ಮಾದರಿಯಲ್ಲಿ ನಿರ್ಮಾಣ ಮಾಡಿರೋ ಬೃಹತ್ ವೇದಿಕೆಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಕೇಂದ್ರ ಸಚಿವ ಭಗವಂತ ಖೂಬಾ ದೀಪ ಬೆಳಗಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹಿರಿಯ ಪತ್ರಕರ್ತರು, ಕನ್ನಡ ಪರ ಹೋರಾಟಗಾರರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗಾನ ಕಲಾವಿದರ ಸುಮಧುರ ಗಾಯನ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಜನಮನ ಸೂರೆಗೊಳಿತು. ಖ್ಯಾತ ಕನ್ನಡ ಗಾಯಕರಾದ ಅನುರಾಧಾ ಭಟ್, ಸಲೀಂ ಸುಲೇಮಾನ್, ಸಂಗೀತ ನಿರ್ದೇಶಕ ವಿಜಯ್ ಪ್ರಕಾಶ್ ಅವರು ಸಂಗೀತ ರಸದೌತಣ ಉಣ ಬಡಿಸಿದರು. ಗಾಯಕರ ಕಂಠದಿಂದ ಹೊರಹೊಮ್ಮಿದ ಒಂದೊಂದು ಮಧುರ ಹಾಡುಗಳು ಮೊದಲ ದಿನದ ಉತ್ಸವದ ರಂಗೇರಿಸಿತ್ತು. ಗಾನ ಕಲಾವಿದರ ಸುಮಧುರ ಗಾಯನಕ್ಕೆ ನೆರೆದ ಯುವಕ, ಯುವತಿಯರು, ಮಕ್ಕಳು ಹುಚ್ಚೆದ್ದು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಉತ್ಸವದ ಸಂಗೀತ ಸಂಜೆಗೆ ಕಲಬುರಗಿ ಮಂದಿ ಮನಸೋತು ಸೈ ಎಂದರು.
ಉತ್ಸವಕ್ಕೆ ಜನಪ್ರತಿನಿಧಿಗಳ ಗೈರು : ಇನ್ನು ಉತ್ಸವ ನಿಮಿತ್ತ ನಿನ್ನೆ ಶುಕ್ರವಾರ ಬೆಳಗ್ಗೆ ನಗರದ ರಂಗಮಂದಿಂದ ಉತ್ಸವ ನಡೆಯುವ ಗುಲ್ಬರ್ಗಾ ವಿಶ್ವವಿದ್ಯಾಲಯವರೆಗೆ ವೀರಗಾಸೆ ಕುಣಿತ, ಡೊಳ್ಳು ಕುಣಿತ, ವಿವಿಧ ಕಲಾ ತಂಡಗಳ ನೃತ್ಯದ ಮೂಲಕ ವೈಭವದಿಂದ ಮೆರವಣಿಗೆ ಸಾಗಿತ್ತು. ಕಲ್ಯಾಣ ಕರ್ನಾಟಕ ಮೊದಲ ದಿನ ಉತ್ಸವಕ್ಕೆ ಕಲಬುರಗಿ ಸೇರಿದಂತೆ ಏಳು ಜಿಲ್ಲೆಗಳಿಂದ ಜನಸಾಗರ ಹರಿದು ಬಂದಿದ್ದು, ಉತ್ಸವವನ್ನು ಏಂಜಾಯ್ ಮಾಡಿದರು. ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಜನಪ್ರತಿನಿಧಿಗಳ ಗೈರು ಎದ್ದುಕಾಣುತ್ತಿತ್ತು. ಒಟ್ಟಾರೆ ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರೋ ಕಲ್ಯಾಣ ಕರ್ನಾಟಕ ಉತ್ಸವದ ಮೊದಲ ದಿನ ಸಕ್ಸಸ್ ಕಂಡಿದೆ.
ಇದನ್ನೂ ಓದಿ:ನಂಜುಂಡೇಶ್ವರನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಹಿತ ₹1.26 ಕೋಟಿ ಕಾಣಿಕೆ ಸಂಗ್ರಹ