ಕಲಬುರಗಿ: ಎಂಜಿನಿಯರಿಂಗ್ ಮುಗಿಸಿ ಖಾಸಗಿ ಸಿವಿಲ್ ಕಾಂಟ್ರಾಕ್ಟರ್ ಜೊತೆ ಕೆಲಸ ಮಾಡುತ್ತಿದ್ದ ಯುವಕ ಆಗಾಗ ಸಮಯ ನೋಡಿಕೊಂಡು ತನ್ನ ಅತ್ತಿಗೆ ಮನೆಗೆ ಹೋಗಿ ಬರುತ್ತಿದ್ದ. ಅಲ್ಲಿ ಅತ್ತಿಗೆಯನ್ನು ಕಾಮುಕ ದೃಷ್ಟಿಯಿಂದ ನೋಡುತ್ತ ಚುಡಾಯಿಸುತ್ತಿದ್ದನಂತೆ. ಈ ವರ್ತನೆಯು ಆತನ ದುರಂತ ಅಂತ್ಯಕ್ಕೆ ಕಾರಣವಾಗಿದೆ.
ಕೇವಲ 23 ವರ್ಷದ ಶಿವಪುತ್ರ ಪಗಡೆ ಎಂಬಾತನೆ ಬೀದಿ ಹೆಣವಾದ ಯುವಕ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಬೋದಾನ್ ಗ್ರಾಮದ ನಿವಾಸಿಯಾದ ಈತ, ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿ ಕಲಬುರಗಿಯ ಖಾಸಗಿ ಕಾಂಟ್ರಾಕ್ಟರ್ ಬಳಿ ಕೆಲಸ ಮಾಡುತ್ತಿದ್ದ. ಆದರೆ ಸಂಬಂಧದಲ್ಲಿ ಅಣ್ಣನಾಗಿದ್ದ ಶರಣಬಸವ ಎಂಬುವರ ಮನೆಗೆ ಆಗಾಗ ಬಂದು ಹೋಗ್ತಿದ್ದ. ಶರಣಬಸವ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದು ಅವರ ಪತ್ನಿಯೊಂದಿಗೆ ಶಿವಪುತ್ರ ಸಲುಗೆಯಿಂದ ಇರುತ್ತಿದ್ದ. ಮೈದುನನಾಗುತ್ತಿದ್ದ ಶಿವಪುತ್ರನನ್ನ ಶರಬಸವನ ಪತ್ನಿ ಕೂಡ ಸಲುಗೆಯಿಂದ ಮಾತಾಡುತ್ತಿದ್ದರು. ಆದರೆ ಶಿವಪುತ್ರ ಆಕೆಯ ಮೇಲೆ ಕಾಮದೃಷ್ಟಿ ಬೀರಿದ್ದಲ್ಲದೆ, ಮಾತಿನಲ್ಲೇ ಅತ್ತಿಗೆಯನ್ನ ಚುಡಾಯಿಸೋದು ಮಾಡುತ್ತಿದ್ದ. ಈ ವಿಷಯ ಶರಣಬಸವನಿಗೆ ಗೊತ್ತಾಗಿದ್ದು, ಶಿವಪುತ್ರನ ಮೇಲೆ ಕಣ್ಣಿಟ್ಟಿದ್ದ. ಜೂನ್ 19ರಂದು ಶರಣಬಸವ ಮನೆಗೆ ಬಂದ ಸಂದರ್ಭದಲ್ಲಿ ಶಿವಪುತ್ರ ಮನೆಯಲ್ಲಿ ಇರುವುದನ್ನು ಕಂಡು ಇಬ್ಬರೊಂದಿಗೆ ತಮ್ಮ ಬೊಲೆರೋ ವಾಹನದಲ್ಲಿ ಆತನನ್ನು ಕೈಕಟ್ಟಿಹಾಕಿ ಅಪಹರಿಸಿಕೊಂಡು ತೆರಳಿದ್ದಾರೆ. ಬಳಿಕ ಸೈಯದ್ ಚಿಂಚೋಳಿ ಗ್ರಾಮದ ಬಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದು, ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಮೂವರ ಬಂಧನ:
ಹತ್ಯೆ ಬಳಿಕ ಕೃತ್ಯ ತಮ್ಮ ಮೇಲೆ ಬರಬಾರದು ಅಂತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಜೂನ್ 20ರ ಬೆಳಗ್ಗೆ ಸೈಯದ್ ಚಿಂಚೋಳಿ ಗ್ರಾಮದ ಬಳಿ ಬೆಳ್ಳಂಬೆಳಗ್ಗೆ ಶವ ಹೊತ್ತಿ ಉರಿಯುತ್ತಿರುವುದನ್ನ ಕಂಡ ಗ್ರಾಮಸ್ಥರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಅಡೂರು ಶ್ರೀನಿವಾಸುಲು, ಸಿ ವಿಭಾಗದ ಎಸಿಪಿ ಜೆ.ಹೆಚ್. ಇನಾಮ್ದಾರ್ ಮತ್ತು ಶ್ವಾನದಳ ತಂಡ ಆಗಮಿಸಿ ಪರಿಶೀಲನೆ ನಡೆಸಿತ್ತು. ಆದರೆ ಸ್ಥಳದಲ್ಲಿ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ವಸ್ತುಗಳು ಸಿಕ್ಕಿರಲಿಲ್ಲ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಹತ್ಯೆಯಾದ ಶಿವಪುತ್ರನ ಸಹೋದರ ಸಂಬಂಧಿ ಶರಣಬಸವನೇ ಈ ಕೃತ್ಯ ಎಸಗಿರೋದು ಪೊಲೀಸರಿಗೆ ತಿಳಿದುಬಂದಿತ್ತು. ನಂತರ ಗ್ರಾಮೀಣ ಠಾಣೆ ಪೊಲೀಸರು, ಶರಣಬಸವ ಕಾಂದೆ, ಚೆನ್ನವೀರ ಕಾಂದೆ, ಬಸಲಿಂಗಪ್ಪ ಕಮಲಾಪುರ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಅಡೂರು ಶ್ರೀನಿವಾಸಲು, ಸಂಬಂಧದಲ್ಲಿ ಸಹೋದರನಾಗಿದ್ದ ಶರಣಬಸವನ ಮನೆಗೆ ಹೋಗಿ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸುವುದು, ಚುಡಾಯಿಸೊದನ್ನ ಮಾಡಿರುವುದೇ ಕೊಲೆಗೆ ಕಾರಣವಾಗಿದೆ. ಯುವಕ ಶಿವಪುತ್ರನನ್ನು ಬೊಲೆರೋ ವಾಹನದಲ್ಲಿ ಅಪಹರಿಸಿಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಕೊಲೆಗೈದು, ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ಕೊಲೆ.. ಕೈಕಟ್ಟಿ, ಪೆಟ್ರೋಲ್ ಸುರಿದು ವಿದ್ಯಾರ್ಥಿಯ ಬರ್ಬರ ಹತ್ಯೆ!