ಹಾವೇರಿ: ರಾಣೆಬೆನ್ನೂರು, ಹಿರೇಕೆರೂರು, ಹಾನಗಲ್ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ ಕಳ್ಳರು ಈಗಾಗಲೇ ಕೈಚಳಕ ತೋರಿಸಿದ್ದಾರೆ. ಬ್ಯಾಡಗಿ ತಾಲೂಕಿನ ತಿಮ್ಮೇನಹಳ್ಳಿ, ಹೊಂಬರಡಿ ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಶಿವಪುರ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದಾರೆ. ದೇವಸ್ಥಾನದಲ್ಲಿರುವ ಹಿತ್ತಾಳೆ, ತಾಮ್ರ ಮತ್ತು ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಅದರಲ್ಲೂ ಕೆಜಿಗಟ್ಟಲೇ ಭಾರವಿರುವ ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ರಾತ್ರಿಯಾಗುತ್ತಿದ್ದಂತೆ ತಮ್ಮ ಕೈಚಳಕ ತೋರಿಸುತ್ತಿರುವ ಕಳ್ಳರು, ಸುತ್ತಮುತ್ತಲ ಗ್ರಾಮಸ್ಥರ ನಿದ್ದೆಗೆಡಿಸಿದ್ದಾರೆ. ಅಕ್ಕ ಪಕ್ಕದ ಗ್ರಾಮದಲ್ಲಿರುವ ದೇವಸ್ಥಾನಗಳನ್ನ ಕಳ್ಳರು ಸರತಿಯಾಗಿ ಕಳ್ಳತನ ಮಾಡಿದ್ದಾರೆ. ಈ ಕುರಿತಂತೆ ಗ್ರಾಮಸ್ಥರು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದೇವಸ್ಥಾನಗಳ ಅರ್ಚಕರು ಹೆದರಿ ಪ್ರಕರಣ ಸಹ ದಾಖಲಿಸಿಲ್ಲ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ದೇವಸ್ಥಾನಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಊರ ಹೊರಗೆ ಇರುವ ದೇವಸ್ಥಾನಗಳ ಅರ್ಚಕರು ಸೇರಿದಂತೆ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಪೊಲೀಸ್ ಇಲಾಖೆ ಈ ಕೂಡಲೇ ಆರೋಪಿಗಳನ್ನ ಬಂಧಿಸಿ, ಶಿಕ್ಷೆಗೆ ಒಳಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಗ್ರಾಮದ ಹೊರಗೆ ಇರುವ ದೇವಸ್ಥಾನಗಳಿಗೆ ರಾತ್ರಿ ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಲಾರಿ ಟೈರ್ಗಳೇ ಟಾರ್ಗೆಟ್.. ಆರು ತಿಂಗಳಲ್ಲಿ ಮೂರು ಬಾರಿ ಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ