ಹಾವೇರಿ : ರೈತರ ಪ್ರಗತಿಗೆ ಕಾರ್ಖಾನೆಗಳು ನೆರವಾಗಲಿದೆ. ಎಥಿನಾಲ್ ಹಸಿರು ಇಂಧನ ಬಳಕೆ ಮುಂದಿನ ದಿನಗಳಲ್ಲಿ ಅಗತ್ಯ ಇದೆ. ಇನ್ನು ಆರು ತಿಂಗಳಿನಲ್ಲಿ ಕಾರ್ಖಾನೆ ಕೆಲಸ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕೋಣನಕೇರಿಯಲ್ಲಿ ಡಿಸ್ಟಲರಿ ಘಟಕದ ಗುದ್ದಲಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಯಡಿಯೂರಪ್ಪನವರ ಅವಧಿಯಲ್ಲಿ ಸಕ್ಕರೆ ಖಾತೆ ಕೊಟ್ರೆ ಹೆಬ್ಬಾರರು ಸಕ್ಕರೆ ಕಾರ್ಖಾನೆಯನ್ನೆ ಮಾಡಿದರು ಎಂದು ಹಾಸ್ಯ ಮಾಡಿದರು.
ರೈತರು ಪ್ರಗತಿಯಾಗಲು ಈ ಕಾರ್ಖಾನೆ ಅನುಕೂಲ ಆಗಲಿದೆ. ರೈತರ ಬದುಕಿನಲ್ಲಿ ಬದಲಾವಣೆ ತರೋ ಕೆಲಸ ಈ ಕಾರ್ಖಾನೆಯಿಂದ ಆಗುತ್ತದೆ ಅಂತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ವಿದೇಶದಿಂದ ಪೆಟ್ರೋಲ್, ಡೀಸೆಲ್ ತರಲು ನಮ್ಮ ದೇಶದಿಂದ ಹೆಚ್ಚಿನ ಹಣ ಖರ್ಚಾಗುತ್ತಿದೆ.
ಎಥಿನಾಲ್ ಬಳಕೆಗೆ ಉತ್ತೇಜನ ನೀಡಿ ಪರಿಸರ ಶುದ್ಧವಾಗಿಟ್ಟು, ಆರ್ಥಿಕ ಚಟುವಟಿಕೆ ಮಾಡಬಹುದು ಅಂತಾ ಎಥಿನಾಲ್ ಪಾಲಿಸಿ ಮಾಡಿದ್ದಾರೆ. ಪ್ರಧಾನಿಯವರು ಮಾಡಿರೋ ಎಥಿನಾಲ್ ಪಾಲಿಸಿಯ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿರುವುದು ನಮ್ಮ ಕರ್ನಾಟಕ.
ಮೆಕ್ಕೆಜೋಳ, ಕಬ್ಬು, ಭತ್ತಗಳಿಂದ ಎಥಿನಾಲ್ ತಯಾರು ಮಾಡಲು ಈ ಕಾರ್ಖಾನೆ ಸಿದ್ಧವಾಗುತ್ತಿದೆ. ಕಾರ್ಖಾನೆಯಿಂದ ಈ ಭಾಗದಲ್ಲಿ ಬಹಳ ದೊಡ್ಡ ಆರ್ಥಿಕ ಬದಲಾವಣೆ ಆಗಲಿದೆ. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದೇನೆ ಎಂದರು.
ಎರಡನೆ ಹಂತದಲ್ಲಿ ಕೈಗಾರಿಕೆ. ಟೆಕ್ಸ್ಟೈಲ್ಸ್ ಮತ್ತು ಗಾರ್ಮೆಂಟ್ ಇಂಡಸ್ಟ್ರೀಸ್ ಬರುತ್ತವೆ. ಬೆಂಗಳೂರಿಗೆ ಸೀಮಿತವಾಗಿರೋ ಯೋಜನೆಗಳನ್ನ ಇಲ್ಲಿಗೆ ತರೋ ಪ್ರಯತ್ನ ಮಾಡ್ತಿದ್ದೇನೆ. ಯುವಕರು ಸ್ವಾವಲಂಬಿ ಆಗಬೇಕು ಅಂತಾ ಕಾರ್ಖಾನೆಗಳನ್ನ ನಮ್ಮ ಕ್ಷೇತ್ರಕ್ಕೆ ತರೋ ಪ್ರಯತ್ನ ಮಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಪ್ರಸನ್ನಾನಂದ ಸ್ವಾಮೀಜಿ ಜತೆ ಸಂಪರ್ಕದಲ್ಲಿದ್ದೇನೆ : ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ವಾಲ್ಮೀಕಿ ಸಮುದಾಯದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಜೊತೆ ಸಂಪರ್ಕದಲ್ಲಿದ್ದೇನೆ. ನಮ್ಮ ಶಾಸಕರೆಲ್ಲ ಹೋಗಿ ಶ್ರೀಗಳನ್ನು ಭೇಟಿಯಾಗಿದ್ದಾರೆ. ನಾನು ಅವರ ಬಳಿ ಈ ಕುರಿತಂತೆ ಮತ್ತೆ ಮಾತನಾಡ್ತೇನೆ. ನಿರಂತರವಾಗಿ ಅವರ ಬಳಿ ಮಾತನಾಡುತ್ತಲೆ ಇದ್ದೇನೆ. ನಾವು ಮತ್ತು ಸಮಾಜದವರು ಸೇರಿ ಈ ಕುರಿತು ಆದಷ್ಟು ಬೇಗ ನಿರ್ಣಯ ತೆಗೆದು ಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.