ಹಾವೇರಿ: ಇಂದು ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಶಂಕರ್ನಾಗ್ ಜನ್ಮದಿನ. ಇಂದು ಅವರು ನಮ್ಮೊಂದಿಗಿದ್ದಿದ್ದರೆ 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಹಾವೇರಿ ಕೇಂದ್ರ ಬಸ್ ನಿಲ್ದಾಣದ ಆಟೋ ಚಾಲಕರ ಸಂಘದ ವತಿಯಿಂದ ಶಂಕರ್ನಾಗ್ ಜನ್ಮದಿನಾಚರಣೆ ನಡೆಯಿತು.
ಕೇಂದ್ರ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್ ಅನ್ನು ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸ್ಟ್ಯಾಂಡ್ನಲ್ಲಿ ಶಂಕರ್ ನಾಗ್ ನಟಿಸಿದ ಚಲನ ಚಿತ್ರಗಳ ಹಾಡುಗಳು ಮಾರ್ದನಿಸಿದವು. ಶಂಕರ್ನಾಗ್ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಲಾಯಿತು.
ನಂತರ ಅಭಿಮಾನಿಗಳು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆಯನ್ನು ಅಭಿಮಾನಿಗಳ ಸಂಘ ಮಾಡಿತ್ತು. ಪ್ರಯಾಣಿಕರಿಗೆ, ಅಭಿಮಾನಿಗಳಿಗೆ ಪಲಾವ್ ಮತ್ತು ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರ್ನಾಗ್ ಅಭಿಮಾನಿಗಳ ಸಂಘದ ಸದಸ್ಯರು, ಶಂಕರ್ನಾಗ್ ಕನ್ನಡ ನಾಡು ಕಂಡ ಅಪ್ರತಿಮ ನಟ. ರಂಗಭೂಮಿ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿದ್ದ ಅವರು ಬಹುಬೇಗ ನಮ್ಮನ್ನಗಲಿದ್ದು ದುರ್ದೈವದ ಸಂಗತಿ ಎಂದರು.
ಇದನ್ನೂ ಓದಿ: ಅಭಿಮಾನಿಗಳ ಆಟೋರಾಜ ಶಂಕ್ರಣ್ಣರ ಜನ್ಮದಿನ.. ಸಾಂಗ್ಲಿಯಾನ 2 ರೀ ರಿಲೀಸ್
ಕಳೆದ ಐದು ವರ್ಷಗಳಿಂದ ಹಾವೇರಿಯಲ್ಲಿ ಕೇಂದ್ರ ಬಸ್ ನಿಲ್ದಾಣದ ಆಟೋ ಚಾಲಕರ ಸಂಘ ಶಂಕರ್ನಾಗ್ ಜನ್ಮದಿನ ಆಚರಿಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಶಂಕರ್ನಾಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕೇಕ್ ಕಟ್ ಮಾಡಿ ಸಂಭ್ರಮಿಸಲಾಗುತ್ತದೆ. ಮುಂದೆಯೂ ಸಹ ತಮ್ಮ ಮೆಚ್ಚಿನ ನಟನ ಜನ್ಮದಿನ ಆಚರಿಸುವುದಾಗಿ ತಿಳಿಸಿದರು.
ಆಟೋ ಚಾಲಕರಿಗೆ ಗೌರವ ತಂದುಕೊಟ್ಟ ಶಂಕರ್ನಾಗ್ ನಮ್ಮ ಜೊತೆ ಯಾವಾಗಲೂ ಇರುತ್ತಾರೆ. ಅವರ ಆದರ್ಶ ನಮಗೆ ಮಾರ್ಗದರ್ಶಿಯಾಗಿದ್ದು, ಗ್ರಾಹಕರನ್ನು ದೇವರಂತೆ ನೋಡುತ್ತೇವೆ ಎಂದು ವಾಗ್ದಾನ ಮಾಡಿದರು.