ಹಾವೇರಿ: ಜಿಲ್ಲೆಯ ಓರ್ವ ಸಚಿವ ಮತ್ತು ಶಾಸಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಎರಡು ಕ್ಷೇತ್ರಗಳ ಜನತೆಯಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ.
ರಾಣೆಬೆನ್ನೂರು ಶಾಸಕರಾಗಿ ಆಯ್ಕೆಯಾಗಿ ನಂತರ ಸಚಿವರಾದ ಆರ್.ಶಂಕರ್ ವಿರುದ್ಧ ರಾಣೆಬೆನ್ನೂರು ಕ್ಷೇತ್ರದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರ್. ಶಂಕರ್ ಯಾವಾಗಲೂ ಶಾಸಕ ಸ್ಥಾನವನ್ನ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಂಡರು. ಮೊದಲು ಅರಣ್ಯ ಸಚಿವರಾದರು, ಮತ್ತೇ ಸಚಿವ ಸ್ಥಾನದಿಂದ ತೆಗೆಯುತ್ತಿದ್ದಂತೆ ಕಾಂಗ್ರೆಸ್ಗೆ ಸೇರ್ಪಡೆ ಗೊಂಡು ಮತ್ತೇ ಸಚಿವರಾದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಗ ಮತ್ತೆ ಆಮಿಷ ಒಡ್ಡುತ್ತಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಡೀ ರಾಜ್ಯದಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿತ್ತು. ಅದರ ಮಾನವನ್ನು ಶಾಸಕ ಆರ್.ಶಂಕರ್ ಹರಾಜು ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಣೆಬೆನ್ನೂರು ಕ್ಷೇತ್ರ ತನ್ನ ಇತಿಹಾಸದಲ್ಲಿ ಇಂತಹ ಶಾಸಕನನ್ನ ಕಂಡಿಲ್ಲಾ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ನಡೆಗೆ ಕೂಡ ಅಸಮಾಧಾನ ವ್ಯಕ್ತವಾಗುತ್ತಿದೆ. ಬಿ.ಸಿ.ಪಾಟೀಲ್ ಮೊದಲು ಜೆಡಿಎಸ್ನಲ್ಲಿದ್ದರು ಆನಂತರ ಕಾಂಗ್ರೆಸ್ ಸೇರಿದರು ಇದೀಗ ಬಿಜೆಪಿ ಕದ ತಟ್ಟುತ್ತಿದ್ದಾರೆ. ಬಿ.ಸಿ. ಪಾಟೀಲ್ ಇದರಲ್ಲೇ ತಲ್ಲೀನರಾಗಿದ್ದರೆ ಹೊರತು ಕ್ಷೇತ್ರದ ಅಭಿವೃದ್ದಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲಾ ಎಂದು ಸ್ಥಳೀಯ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.