ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ಭತ್ತದ ಬೆಳೆ ಬೆಳೆದರೂ ಕಾಳುಕಟ್ಟದೆ ಇರುವ ಅಂಶ ಪತ್ತೆಯಾಗಿದೆ. ಗ್ರಾಮದ ರವಿ ಕಾಗಿನೆಲೆ ಎಂಬುವವರು ನಾಲ್ಕು ಎಕರೆಯಲ್ಲಿ ಭತ್ತದ ನಾಟಿ ಮಾಡಿದ್ದರು. ಆದರೆ, ನಾಟಿ ಮಾಡಿ ನಾಲ್ಕು ತಿಂಗಳಾದರೂ ತೆನೆ ಬಂದಿಲ್ಲ. ಮೂರು ಅಡಿವರೆಗೆ ಬೆಳೆ ಬೆಳೆದು ನಿಂತಿದೆ.
ರವಿ ಕಾಗಿನೆಲೆ ಅವರ ಸುತ್ತಮುತ್ತಲಿನ ಜಮೀನುಗಳಲ್ಲಿರುವ ಇತರೆ ರೈತರು ಭತ್ತ ಬೆಳೆದು ಮತ್ತೆ ನಾಟಿ ಮಾಡಲು ಮುಂದಾಗಿದ್ದಾರೆ. ಆದರೆ, ರವಿ ಕಾಗಿನೆಲೆ ಅವರ ಭತ್ತ ಫಸಲು ಕಟ್ಟಿಲ್ಲ. ಎಲ್ಲರಂತೆ ಭತ್ತಕ್ಕೆ ಗೊಬ್ಬರ ಹಾಕಿದ್ದೇನೆ. ಅಲ್ಲದೆ, ಔಷಧಿ ಸಹ ಸಿಂಪಡಿಸಿದ್ದೇನೆ. ಆದರೆ, ಬೆಳೆದಿದ್ದು ಬಿಟ್ಟರೆ ತೆನೆ ಕಟ್ಟಿಲ್ಲ ಎಂದು ಅವರು ಹೇಳಿದರು.
ಈ ರೈತ ಕುಬ್ಜ ವ್ಯಕ್ತಿ. ಮನೆಯಲ್ಲಿ ತಾಯಿ ವೃದ್ದೆ. ಸಹೋದರಿ ವಿಕಲಚೇತನಳು. ಮನೆಗೆ ರವಿ ಕಾಗಿನೆಲೆ ಅವರ ನಾಲ್ಕು ಎಕರೆ ಜಮೀನು ಆಸರೆಯಾಗಿತ್ತು. ಆದರೆ, ಪ್ರಸ್ತುತ ವರ್ಷ ಭತ್ತ ಬೆಳೆದು ತೆನೆ ಕಟ್ಟದಿರುವುದು ಈ ಕುಟುಂಬಕ್ಕೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ. ಸಾಲ ಮಾಡಿ ಬೆಳೆದಿದ್ದ ಬೆಳೆ ಈ ರೀತಿಯಾಗಿರುವುದು ರವಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಆದಾಯ ಇರಲಿ, ಕೊನೆಯ ಪಕ್ಷ ಜಮೀನಿಗೆ ಖರ್ಚು ಮಾಡಿದ್ದ ಹಣ ಸಹ ಬಾರದಂತಾಗಿದೆ. ಕಳಪೆ ಬಿತ್ತನೆ ಬೀಜವೇ ಈ ರೀತಿಯಾಗಲು ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮ ಆರಂಭ: 15 ವಿಶೇಷ ವಾಹನಗಳು ಸಿದ್ಧ