ರಾಣೆಬೆನ್ನೂರು: ನಗರದ ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ನಾಮದೇವ ಕಾಗದಗಾರ ಅವರ ನಿಸರ್ಗ ವಿಭಾಗದ ಚಿತ್ರವು ಅಂತಾರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಪ್ಯಾರಾಮೌಂಟ್ ಫೋಟೋಗ್ರಾಫಿಕ್ ಸರ್ಕ್ಯೂಟ್, ಗ್ರೀಸ್ ದೇಶದ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫೋಟೋಗ್ರಾಫಿಕ್ ಸಂಸ್ಥೆ ಹಾಗೂ ಪಾಟ್ನಾದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಾಫಿಕ್ ಸಂಸ್ಥೆಗಳು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದಲ್ಲಿ ರಾಣೆಬೆನ್ನೂರು ಮೂಲದ ಹವ್ಯಾಸಿ ಛಾಯಾಗ್ರಾಹಕ ನಾಮದೇವ ಕಾಗದಗಾರ ಸೆರೆಹಿಡಿದ 'ದರೋಡೆ ನೊಣಗಳ ಮಿಲನ' ಛಾಯಾಚಿತ್ರವು ನೇಚರ್ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ರಾಣೆಬೆನ್ನೂರು ಸಮೀಪದ ಅಳಲಗೇರಿ ಅರಣ್ಯ ಪ್ರದೇಶದಲ್ಲಿ ಈ ದರೋಡೆ ನೊಣಗಳ ಮಿಲನ ಕ್ರಿಯೆ ಛಾಯಾಚಿತ್ರವನ್ನು ನಾಮದೇವ ಕಾಗದಗಾರ ಸೆರೆಹಿಡಿದಿದ್ದರು. ಜಗತ್ತಿನ 33ಕ್ಕೂ ಹೆಚ್ಚು ದೇಶದ ಛಾಯಾಗ್ರಾಹಕರು ಸೆರೆಹಿಡಿದ 800ಕ್ಕೂ ಹೆಚ್ಚು ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.
ನಾಮದೇವ ಅವರ ಸಾಧನೆಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮ್ತಿ, ಹವ್ಯಾಸಿ ಛಾಯಾಗ್ರಾಹಕರಾದ ಚಂದ್ರು ಶಿಡೇನೂರ, ಹರೀಶ ಬಡಿಗೇರ, ಸಾಹಿತಿಗಳಾದ ಬಿ.ಶ್ರೀನಿವಾಸ, ಚಂ.ಸು. ಪಾಟೀಲ್, ಇಂದಿರಾ ಕೊಪ್ಪದ ಸೇರಿದಂತೆ ಮತ್ತಿರರು ಅಭಿನಂದನೆ ಸಲ್ಲಿಸಿದ್ದಾರೆ.