ರಾಣೆಬೆನ್ನೂರು: ನಗರದ 24x7 ಕುಡಿಯುವ ನೀರಿನ ಯೋಜನೆ ಕಳಪೆ ಕಾಮಗಾರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ನಗರಸಭಾ ಕಾರ್ಯಾಲಯದ ಮುಂದೆ ನಡೆಯುತ್ತಿರುವ ನಗರಸಭಾ ಸದಸ್ಯರ ಪ್ರತಿಭಟನೆ ಮುಂದುವರಿದಿದೆ. ಆದರೆ ಈವರೆಗೂ ಸಂಬಂಧಿಸಿದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿಲ್ಲ. ಅಲ್ಲದೇ ನಗರಸಭಾ ಅಧಿಕಾರಿಗಳು ಸದಸ್ಯರ ಬಗ್ಗೆ ಮಾಹಿತಿ ಪಡೆಯುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಸದ್ಯ ನಗರಸಭಾ ಸದಸ್ಯರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದು, ನಾಳೆಯೊಳಗೆ ಜಿಲ್ಲಾಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಬರದಿದ್ದರೆ ರಾಣೆಬೆನ್ನೂರು ಬಂದ್ ಮಾಡುವುದು ಅನಿವಾರ್ಯ ಎಂದು ನಗರಸಭಾ ಸದಸ್ಯ ಕೋಡಿಹಳ್ಳಿ ನಿಂಗರಾಜ ಎಚ್ಚರಿಕೆ ನೀಡಿದ್ದಾರೆ.
ನಗರಸಭಾ ಸದಸ್ಯರ ಪ್ರತಿಭಟನೆಗೆ ರೈತ ಸಂಘಟನೆ ಬೆಂಬಲ :
ಇಂದು ರೈತ ಸಂಘಟನೆಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದರ ಜತೆಗೆ ನಗರಸಭಾ ಸದಸ್ಯರು ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ನಗರಸಭಾ ಸದಸ್ಯರಿಗೆ ಬೆಂಬಲ ಸೂಚಿಸಿದ್ರು.