ಹಾವೇರಿ: ರಾಜ್ಯಾದ್ಯಂತ ಜುಲೈ 19(ನಾಳೆ) ಮತ್ತು 22 ರಂದು SSLC ಪರೀಕ್ಷೆ ನಡೆಯಲಿದೆ. ಹಾವೇರಿ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯ ಹಿರೇಕೆರೂರು ತಾಲೂಕು ಚಿಕ್ಕೇರೂರು ಗ್ರಾಮದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 32 ವಿದ್ಯಾರ್ಥಿಗಳಿಗೆ ಇನ್ನೂ ಪರೀಕ್ಷೆಯ ಪ್ರವೇಶ ಪತ್ರ ಬಂದಿಲ್ಲ.
ಶಾಲೆಯಲ್ಲಿ ಒಟ್ಟು 64 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 32 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪತ್ರ ಬಂದಿದೆ. ಇನ್ನುಳಿದ 32 ವಿದ್ಯಾರ್ಥಿಗಳಿಗೆ ಇನ್ನೂ ಪ್ರವೇಶ ಪತ್ರ ತಲುಪಿಲ್ಲ.
ಈ ಕುರಿತಂತೆ ಪೋಷಕರು ಶಾಲಾ ಮುಖ್ಯೋಪಾಧ್ಯಾಯರನ್ನು ಕೇಳಿದರೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ. ಪ್ರಾಜೆಕ್ಟ್ ವರ್ಕ್ ಸೇರಿದಂತೆ ವಿವಿಧ ಅಸೈನಮೆಂಟ್ ಮಾಡುವಲ್ಲಿ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಪರೀಕ್ಷೆಗೆ ಕೂರಿಸುವ ಬಗ್ಗೆ ಎಸ್ಎಸ್ಎಲ್ಸಿ ಬೋರ್ಡ್ಗೆ ಮಾಹಿತಿ ಕಳಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ, ಈ ವಿದ್ಯಾರ್ಥಿಗಳು ಶಾಲೆಯ ಶುಲ್ಕ ಸೇರಿದಂತೆ ವಿವಿಧ ಶುಲ್ಕ ಭರಿಸದ ಕಾರಣ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿಲ್ಲ ಎಂದಿದ್ದಾರೆ.
ಓದಿ : ಜುಲೈ 19ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ; ಸರ್ಕಾರದಿಂದ ಕೋವಿಡ್ ಮುಂಜಾಗ್ರತಾ ಕ್ರಮಗಳು ಹೀಗಿವೆ..
ಇದರಿಂದ ಅಸಮಧಾನಗೊಂಡಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಹಾವೇರಿ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್, ಇದರಲ್ಲಿ ಮೇಲ್ನೋಟಕ್ಕೆ ಮುಖ್ಯೋಪಾಧ್ಯಾಯರ ತಪ್ಪು ಕಂಡು ಬಂದಿದ್ದು, ಅವರನ್ನ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯ ಇಲ್ಲ. ಮತ್ತೊಮ್ಮೆ ನಡೆಯುವ ಪರೀಕ್ಷೆಯಲ್ಲಿ ಅವರಿಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ವಿದ್ಯಾರ್ಥಿಗಳು ನಮಗೆ ಪ್ರವೇಶ ಪತ್ರ ಬೇಕು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಚ್ಚರಿಕೆ ನೀಡಿದ್ದಾರೆ. ನಮ್ಮದಲ್ಲದ ತಪ್ಪಿಗೆ ನಮಗೇಕೆ ಶಿಕ್ಷೆ? ಮುಖ್ಯೋಪಾಧ್ಯಾಯರ ಮೇಲೆ ಕ್ರಮ ಕೈಗೊಳ್ಳಿ, ನಮಗೆ ಪ್ರವೇಶಪತ್ರ ಬೇಕು. ನಾವು ಜುಲೈ 19 ಮತ್ತು 22 ರಂದು ನಡೆಯುವ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದ್ದಾರೆ.