ಹಾವೇರಿ: ಜನರ ಮುಖದ ಸೌಂದರ್ಯದ ವಿಚಾರದಲ್ಲಿ ಹಲ್ಲುಗಳಿಗೆ ಮಹತ್ವದ ಸ್ಥಾನವಿದೆ. ಗಟ್ಟಿಮುಟ್ಟಾದ ಹಲ್ಲುಗಳಿದ್ದರೆ ಆತ್ಮವಿಶ್ವಾಸವೂ ಹೆಚ್ಚುತ್ತದೆ, ಆರೋಗ್ಯವೂ ಸದೃಢವಾಗಿರುತ್ತದೆ. ಆದರೆ ಇಂದಿನ ಆಹಾರ ಪದ್ಧತಿಯಿಂದಾಗಿ ವಯೋವೃದ್ದರಾಗುವ ಮುನ್ನವೇ ಜನರು ಹಲ್ಲುಗಳನ್ನು ಕಳೆದುಕೊಂಡು ಆಹಾರ ನುರಿಸಲು ಪರದಾಡುತ್ತಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಆರ್ಥಿಕ ಸಮಸ್ಯೆಗಳು ಹಾಗು ಆಸ್ಪತ್ರೆಗಳಿಗೆ ಅಲೆದಾಡಬೇಕಿರುವ ಕಾರಣಕ್ಕೆ ಬಡಜನರು ಹಲ್ಲುಗಳನ್ನು ಹಾಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ದಂತಪಂಕ್ತಿ ಹಾಕಿಸಿಕೊಳ್ಳಲು 10 ಸಾವಿರ ರೂಪಾಯಿಂದ 25 ಸಾವಿರದವರೆಗೂ ಹಣ ತೆರಬೇಕು. ಆದರೆ ಹಾವೇರಿ ಜಿಲ್ಲೆಯ 106 ಮಂದಿ ಬಡಜನರಿಗೆ ಹಾವೇರಿ ರೋಟರಿ ಕ್ಲಬ್ ವತಿಯಿಂದ ಉಚಿತವಾಗಿ ದಂತ ಪಂಕ್ತಿ ಹಾಕಿಸಲಾಗಿದೆ.
ಇದಕ್ಕಾಗಿ 130 ಸಿಬ್ಬಂದಿಯ ತಂಡ ಹಾವೇರಿಯಲ್ಲಿ ಬೀಡುಬಿಟ್ಟಿತ್ತು. ದಂತಪಂಕ್ತಿ ತಯಾರಿಸುವ ಸಲಕರಣೆಗಳನ್ನು ತಂದು 24 ಗಂಟೆಯಲ್ಲಿ ಬಡ ವಯೋವೃದ್ದರಿಗೆ ದಂತಪಂಕ್ತಿ ಸಿದ್ಧಮಾಡಿಕೊಟ್ಟಿತು. ಬಿಪಿಎಲ್ ಕಾರ್ಡ್ ಹೊಂದಿರುವ ವೃದ್ಧರಲ್ಲಿ ಒಂದು ಹಲ್ಲು ಮತ್ತು ಎರಡು ಹಲ್ಲಿರುವ ಬಡವರನ್ನು ಜಿಲ್ಲಾಸ್ಪತ್ರೆ ಮೂಲಕ ಆಯ್ಕೆ ಮಾಡಿ ಅವರಲ್ಲಿದ್ದ ಒಂದೆರಡು ಹಲ್ಲು ತೆಗೆಸಿಕೊಂಡು ಬಂದವರಿಗೆ ಸಂಸ್ಥೆ ಸಂಪೂರ್ಣ ಉಚಿತವಾಗಿ ದಂತ ಪಂಕ್ತಿ ತಯಾರಿಸಿ ನೀಡಿತು. ಮುಂಜಾನೆ ನೋಂದಾಯಿಸಿಕೊಂಡಿದ್ದ ವಯೋವೃದ್ದರನ್ನು ಕರೆದು ಅವರ ದಂತಪಂಕ್ತಿಯ ಅಳತೆ ತೆಗೆದುಕೊಳ್ಳಲಾಯಿತು. ಆರಂಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಸೇರಿದಂತೆ ವಿವಿಧ ವಸ್ತುಗಳನ್ನು ಉಪಯೋಗಿಸಿ ಹಲ್ಲಿನ ದವಡೆಯ ಮಾದರಿ ಸಿದ್ದಪಡಿಸಲಾಯಿತು.
ವಸಡಿನ ಮೇಲೆ ನಂಬರ್ ಹಾಕಿ ವಯೋವೃದ್ದರಿಗೆ ತಕ್ಕಂತೆ ಕೃತಕ ವಸಡು ಹಾಕಲಾಯಿತು. ನಂತರ ನುರಿತ ತಜ್ಞರು ವಸಡಿನಲ್ಲಿ ಹಲ್ಲುಗಳನ್ನು ಹಾಕಿ ದಂತಪಂಕ್ತಿ ಸಿದ್ಧಪಡಿಸಿದರು. ದಂತ ಮಹಾವಿದ್ಯಾಲಯದ ಹೆಚ್ಒಡಿ ಸೇರಿದಂತೆ ವೈದ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ನುರಿತ ತಜ್ಞರ ನೇತೃತ್ವದಲ್ಲಿ ಹಗಲು ರಾತ್ರಿ ಶ್ರಮಿಸಿ ಕೇವಲ 24 ಗಂಟೆಯಲ್ಲಿ ದಂತಪಂಕ್ತಿಗಳನ್ನು ತಯಾರಿಸಿದರು. ಒಂದು ವಸಡಿನಲ್ಲಿ 14 ಹಲ್ಲುಗಳಂತೆ 28 ಹಲ್ಲುಗಳಿರುವ ಎರಡು ಸೆಟ್ಗಳನ್ನು ತಯಾರಿಸಲಾಯಿತು.
ರೋಟರಿ ಸಂಸ್ಥೆಯ ಹಾವೇರಿ ಅಧ್ಯಕ್ಷ ಸುಜಿತ ಜೈನ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ವಯೋವೃದ್ದರಿಗೆ ನಮ್ಮ ರೋಟರಿ ಸಂಸ್ಥೆ ಮತ್ತು ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ಉಚಿತ ದಂತಪಂಕ್ತಿ ಹಾಕಿಸಿಕೊಟ್ಟಿದ್ದು ಹೆಮ್ಮೆ ತಂದಿದೆ. ಬಡ ವಯೋವೃದ್ದರಿಗೆ ಪದೇ ಪದೇ ಆಸ್ಪತ್ರೆಗೆ ಅಲೆದಾಡಲು ಸಾಧ್ಯವಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ಹಣ ನೀಡಿ ಹಲ್ಲಿನ ಸೆಟ್ ಹಾಕಿಸಿಕೊಳ್ಳಲು ವಾರದವರೆಗೆ ಸಮಯ ಬೇಕಾಗುತ್ತದೆ. ಇಲ್ಲಿ ಅಳತೆ ತೆಗೆದುಕೊಂಡ 24 ಗಂಟೆಯಲ್ಲಿ ಉಚಿತವಾಗಿ ದಂತಪಂಕ್ತಿ ತಯಾರಿಸಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ದಂತಪಂಕ್ತಿ ಅಳವಡಿಕೆ ಶಿಬಿರದಲ್ಲಿ ಬೆಂಗಳೂರು ದಂತ ಮಹಾವಿದ್ಯಾಲಯದ ಡಾ.ನಮಿತಾ ಶಾನಭಾಗ ಸೇರಿದಂತೆ ನುರಿತ ತಜ್ಞರು ಪಾಲ್ಗೊಂಡಿದ್ದರು. ಈ ರೀತಿಯ ದಂತಪಂಕ್ತಿ ಶಿಬಿರದಲ್ಲಿ ಪಾಲ್ಗೊಂಡು ದಂತಪಂಕ್ತಿಗಳನ್ನು ತಯಾರಿಸುತ್ತಿರುವುದಕ್ಕೆ ನಮಿತಾ ಸಂತಸ ವ್ಯಕ್ತಪಡಿಸಿದರು. ಇಂಥ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ. ಕೊರೊನಾಕ್ಕಿಂತ ಮೊದಲು ದಂತ ಮಹಾವಿದ್ಯಾಲಯ ಹಲವು ದಂತಪಂಕ್ತಿ ಶಿಬಿರ ಏರ್ಪಡಿಸಿ ವಯೋವೃದ್ದರಿಗೆ ದಂತಪಂಕ್ತಿ ನೀಡಿತ್ತು. ಆದರೆ ಕೊರೊನಾ ಬಂದು ಹೋದ ನಂತರ ಈ ರೀತಿಯ ಶಿಬಿರಗಳ ಸಂಖ್ಯೆ ಕಡಿಮೆಯಾಗಿತ್ತು. ಹಾವೇರಿಯಂತಹ ಪ್ರದೇಶಗಳಲ್ಲಿ ಈ ರೀತಿಯ
ಶಿಬಿರ ನಡೆಸಿ ಅವಶ್ಯಕತೆ ಇರುವ ಬಡ ವಯೋವೃದ್ದರಿಗೆ ದಂತಪಂಕ್ತಿ ತಯಾರಿಸಿಕೊಟ್ಟಿದ್ದು ಸಾರ್ಥಕತೆಯ ಭಾವ ತಂದಿದೆ ಎಂದು ಡಾ.ನಮಿತಾ ತಿಳಿಸಿದರು.
ಇದನ್ನೂಓದಿ: ಉದ್ಘಾಟನೆಗೆ ಕಾಯುತ್ತಿರುವ ಹಾವೇರಿ ಮೆಡಿಕಲ್ ಕಾಲೇಜು; ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಜನರ ಒತ್ತಾಯ