ಹಾವೇರಿ : ನೆಹರೂ ಫ್ಯಾಮಿಲಿ ಹೊಗಳುತ್ತಾ ಇದ್ದಿದ್ದಕ್ಕೆ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇಲ್ಲದಿದ್ದರೆ ಡಿಕೆಶಿಯನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕುತ್ತಿದ್ದರು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಸರೀಹಳ್ಳಿ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಜನಿಸಿದ ಪ್ರತಿಯೊಬ್ಬನ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ ಬಂದಿದೆ. ಬ್ರಿಟಿಷರ ವಿರುದ್ಧ ಹೋರಾಡುವಾಗ ಯಾವುದೇ ಪಕ್ಷ, ಸಂಘಟನೆ ಇರಲ್ಲ. ಯಾವುದೇ ಭೇದಭಾವ ಮಾಡದೆ ಹೋರಾಟ ನಡೆಸಿದ್ದಾರೆ. ಅದರಲ್ಲಿ ನೆಹರು ಪ್ಯಾಮಿಲಿಯವರು ದೊಡ್ಡವರಾಗಿ ಪ್ರಧಾನಿಯಾದರು ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಕ್ಷೇಪಣೆ ವ್ಯಕ್ತಪಡಿಸಿತ್ತಾರೆ ಎಂದು ಸಿಎಂ ಬೊಮ್ಮಾಯಿ ಆಡಳಿತ ವೈಖರಿಯನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೊಮ್ಮಯಿಯವರು ಹಗಲಿರುಳು ಶ್ರಮಿಸುತ್ತಿದ್ದು, ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ನಾವು ಎಲ್ಲರೂ ಸೇರಿ ರಾಜ್ಯಕ್ಕೆ ಉತ್ತಮ ಆಡಳಿತ ಕೊಡುತ್ತಿದ್ದೇವೆ ಎಂದರು.
ಸಚಿವ ಆನಂದಸಿಂಗ್ ಖಾತೆ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ರಾಜೀನಾಮೆ ನೀಡುವುದಿಲ್ಲ. ಈ ಕುರಿತಂತೆ ಅವರ ಜೊತೆ ಮಾತನಾಡಿದ್ದೇನೆ. ಅಲ್ಪಸ್ವಲ್ಪ ಅಸಮಾಧಾನವಿದೆ. ಎಲ್ಲವೂ ಸರಿಪಡಿಸಲಾಗುತ್ತದೆ ಎಂದರು.
ರಾಜಕೀಯ ಅರ್ಥ ಕಲ್ಪಿಸುವುದು ಬೇಡ : ಸಚಿವ ಭೈರತಿ ಬಸವರಾಜ್
ಸಚಿವ ಬಿ ಸಿ ಪಾಟೀಲ್ ನಾನು 15 ವರ್ಷಗಳಿಂದ ಸ್ನೇಹಿತರು. ಅವರು ದೇವಸ್ಥಾನ ಆರಂಭಕ್ಕೆ ಎಸ್ಟಿ ಸೋಮಶೇಖರ್ ಹಾಗೂ ನನಗೆ ಆಹ್ವಾನ ನೀಡಿದ್ದಾರೆ. ಅದಕ್ಕಾಗಿ ಬಂದಿದ್ದೇವೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಮೇಕೆದಾಟು ವಿಚಾರದಲ್ಲಿ ನಾವೆಲ್ಲ ಮುಖ್ಯಮಂತ್ರಿಗಳ ನಿಲುವಿಗೆ ಬದ್ಧರಾಗಿದ್ದೇವೆ. ಅವರಿಗೆ ಸಹಕಾರ ಕೊಟ್ಟಿದ್ದೇವೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ತರಲು ನಾವೆಲ್ಲ ಬದ್ಧರಾಗಿದ್ದೇವೆ. ಮೇಕೆದಾಟು ವಿಚಾರದಲ್ಲಿ ಪಕ್ಷಭೇದ ಮರೆತು ಹೋರಾಟ ಮಾಡುತ್ತೇವೆ. ಬೆಂಗಳೂರಿಗೆ ನೀರು ತರುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದರು.
ಓದಿ: ಖಾತೆ ಬದಲಾವಣೆಗಾಗಿ ದೆಹಲಿಗೆ ಹೋಗುವುದಿಲ್ಲ: ಸಚಿವ ಆನಂದ ಸಿಂಗ್ ಸ್ಪಷ್ಟನೆ