ಹಾಸನ: ವರ್ಷದ ಮೊದಲ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯ ತಮಿಳು ಸಮುದಾಯವರು ಅದ್ಧೂರಿಯಾಗಿ ಆಚರಿಸಿದರು.
ಅರಸೀಕೆರೆಯ ವಲಸೆ ತಮಿಳಿಗರಿಂದ ಸಂಕ್ರಾಂತಿ ಆಚರಣೆಯ ಸಂಭ್ರಮ ಇಂದು ಜೋರಾಗಿತ್ತು. ನಗರದ ರೈಲ್ವೆ ಸೇತುವೆ ಪಕ್ಕದಲ್ಲಿರುವ ಮುತ್ತು ಮಾರಿಯಮ್ಮ ದೇವಾಲಯದಲ್ಲಿ ನೂರಾರು ತಮಿಳು ಕುಟುಂಬದ ಮಹಿಳೆಯರು ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಓದಿ: ಗಂಗಾಧರನನ್ನು ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ
ಮಾರ್ಗಳಿ ಮಾಸ ಎಂಬ ಆಚರಣೆಯ ಮೂಲಕ ಸಂಕ್ರಾಂತಿ ಹಬ್ಬವನ್ನ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾಮಾರಿ ಇರುವುದರಿಂದ ಸರಳ ರೀತಿಯಲ್ಲಿ ಆಚರಿಸಿದರು. ಬಡಾವಣೆಯ ನೂರಾರು ತಮಿಳು ಕುಟುಂಬದ ಮಹಿಳೆಯರು ಒಲೆ ಹಚ್ಚಿ, ಅದರ ಸುತ್ತ ಕಬ್ಬಿನಿಂದ ಶೃಂಗಾರ ಮಾಡಿ ಮಣ್ಣಿನ ಮಡಿಕೆಯಿಂದ ಪೊಂಗಲ್ ತಯಾರಿಸಿ ಬಂದ ಭಕ್ತರಿಗೆ ಪ್ರಸಾದ ವಿತರಿಸಿದರು.
![sankranti festival celebration hasana district news](https://etvbharatimages.akamaized.net/etvbharat/prod-images/kn-hsn-04-suggi-avb-7203289-hd_14012021190237_1401f_02570_799.jpg)
ಹಾಸನದ ಚಾಮುಂಡೇಶ್ವರಿ ದೇವಾಲಯ, ಆಂಜನೇಯ ದೇವಾಲಯ, ಚನ್ನರಾಯಪಟ್ಟಣ 48 ಅಡಿ ಆಂಜನೇಯ ದೇವಾಲಯ, ಹೊಳೆನರಸೀಪುರದ ಲಕ್ಷ್ಮಿ ಜನಾರ್ಧನ ಹಾಗೂ ಬೇಲೂರು ಚನ್ನಕೇಶವ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಇನ್ನು ಸಂಜೆಯಾಗುತ್ತಿದ್ದಂತೆ ಪುಟ್ಟ ಪುಟ್ಟ ಮಕ್ಕಳು ಸೀರೆಯನ್ನುಟ್ಟು ಮನೆಮನೆಗೆ ತೆರಳಿ ಎಳ್ಳು-ಬೆಲ್ಲವನ್ನು ಬೀರುವ ಮೂಲಕ ಸಂಕ್ರಾಂತಿ ಹಬ್ಬವನ್ನು ಬರಮಾಡಿಕೊಂಡರು.
![sankranti festival celebration hasana district news](https://etvbharatimages.akamaized.net/etvbharat/prod-images/kn-hsn-04-suggi-avb-7203289-hd_14012021190237_1401f_02570_8.jpg)
ಹಿಂದುಗಳ ಪ್ರಕಾರ ಸಂಕ್ರಾಂತಿ ಮೊದಲ ಹಬ್ಬ, ತಮಿಳರಿಗೆ ಸುಗ್ಗಿ ಅಥವಾ ಹುಗ್ಗಿಹಬ್ಬವೆಂತಲೂ ಆಚರಣೆ ಮಾಡ್ತಾರೆ. ಆದರೆ ವೈಜ್ಞಾನಿಕವಾಗಿ ಚಳಿಗಾಲದಲ್ಲಿ ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾಗಿ ತ್ವಚೆ ಒಣಗಿ, ಕೈಕಾಲುಗಳು ಒಡೆಯಲು ಪ್ರಾರಂಭಿಸುತ್ತವೆ. ಈ ನಿಟ್ಟಿನಲ್ಲಿ ಮಣ್ಣಿನಿಂದ ಮಾಡಿದ ಪುಟ್ಟಪುಟ್ಟ ಮಡಿಕೆಯಲ್ಲಿ ಎಳ್ಳು-ಬೆಲ್ಲ, ಜೀರಿಗೆ, ಕೊಬ್ಬರಿ, ನೆಲಗಡಲೆ, ಕಬ್ಬು ಎಲ್ಲವನ್ನು ಸೇವಿಸುವುದರಿಂದ ಕೊಬ್ಬಿನಂಶ ಹೆಚ್ಚಾಗುತ್ತದೆ.
![sankranti festival celebration hasana district news](https://etvbharatimages.akamaized.net/etvbharat/prod-images/kn-hsn-04-suggi-avb-7203289-hd_14012021190237_1401f_02570_649.jpg)
ಒಟ್ಟಾರೆ ಜಿಲ್ಲೆಯಾದ್ಯಂತ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸರಳವಾಗಿ ಆಚರಿಸಿದರು. ಹಬ್ಬದ ದಿನವೇ ಜಿಲ್ಲೆಗೆ ಕೋವಿಶೀಲ್ಡ್ ಲಸಿಕೆ ಬಂದಿರುವುದು ಸಂಕ್ರಾಂತಿಯ ನಡುವೆ ಜನರಿಗೆ ಮತ್ತೊಂದು ಖುಷಿಯ ಸಂಗತಿ.