ಚನ್ನರಾಯಪಟ್ಟಣ: ತಾಲೂಕಿನ ದೊಡ್ಡ ಗನ್ನಿ ಗ್ರಾಮದಲ್ಲಿ ಸುಮಾರು ಒಂದು ದಶಕದಿಂದ ರಸ್ತೆ ಹಾಳಾಗಿದ್ದು, ರಿಪೇರಿ ಅಥವಾ ಹೊಸ ಕಾಮಗಾರಿ ನಡೆದಿಲ್ಲ ಅಂತ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ಕಿಲೋಮೀಟರ್ ಉದ್ದಕ್ಕೂ ರಸ್ತೆ ಹಾಳಾಗಿದ್ದು, ಯಾವುದೇ ಜನಪ್ರತಿನಿಧಿಗಳು ಇಲ್ಲಿಯವರೆಗೆ ರಸ್ತೆ ಕಾಮಗಾರಿಯನ್ನು ಮಾಡಿಸಿಕೊಟ್ಟಿಲ್ಲ ಎಂದು ಗ್ರಾಮದ ಯುವಕರು ಪ್ರತಿಭಟನೆ ಮಾಡಿದ್ದಾರೆ. ರಸ್ತೆ ಮಧ್ಯದಲ್ಲಿ ಹಾಳಾಗಿರುವ ಜಾಗದಲ್ಲಿ ರಾಗಿ ಗಿಡವನ್ನು ನೆಡುವ ಮೂಲಕ ಪ್ರತಿಭಟನೆ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಶೀಘ್ರ ರಸ್ತೆ ಕಾಮಗಾರಿ ಮಾಡಿಕೊಡದಿದ್ದರೆ ಗ್ರಾಮ ಪಂಚಾಯಿತಿಗೆ ಹಾಗೂ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಪ್ರತಿಭಟನಾ ನಿರತ ಯುವಕರು ಎಚ್ಚರಿಕೆ ಸಹ ನೀಡಿದ್ದಾರೆ.