ಹಾಸನ: ಪ್ರತಿ ತಿಂಗಳು ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
‘ಡಿಸಿಗಳೇ ಹಳ್ಳಿ ಕಡೆ ನಡೆಯಿರಿ’ ಎಂಬ ಕಾರ್ಯಕ್ರಮವನ್ನು ಉಡುಪಿಯಿಂದಲೇ ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿ ಜತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಬೇಕು. ಪೌತಿ ಖಾತೆ, ಪಹಣಿ, ಪಿಂಚಣಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು ಸೇರಿ ಹತ್ತು ಅಂಶಗಳ ಪಟ್ಟಿ ಮಾಡಲಾಗಿದೆ. ಉಪವಿಭಾಗಾಧಿಕಾರಿ ಸಹ ತಿಂಗಳಿಗೆ ಎರಡು ಬಾರಿ ಹಾಗೂ ತಹಶೀಲ್ದಾರ್ ಮೂರು ದಿನ ಹಳ್ಳಿಗೆ ಹೋಗಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ ಜನಸ್ನೇಹಿ ಮಾಡಲು ಹಲವು ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಕೆಲಸ ನಿರ್ವಹಿಸದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ 3ನೇ ಶನಿವಾರ ನಡೆಸುವ ಕುರಿತು ಚರ್ಚೆ ನಡೆದಿದೆ. ಅಧಿಕಾರಿಗಳು ಸಂಜೆವರೆಗೂ ಹಳ್ಳಿಯಲ್ಲಿಯೇ ಇದ್ದು, ಅಲ್ಲಿನ ದಲಿತ ಕೇರಿ, ಅಂಗನವಾಡಿ ಅಥವಾ ಶಾಲೆಯಲ್ಲಿ ಬಿಸಿಯೂಟ ಮಾಡಬೇಕು. ಅಧಿಕಾರಿಗಳು ಮುಂದೆ ಯಾವ ಹಳ್ಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ಒಂದು ತಿಂಗಳು ಮುಂಚೆಯೇ ಘೋಷಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ಅಗತ್ಯವೇ ಇಲ್ಲ. ಮನೆ ಬಾಗಿಲಿಗೆ ಪಿಂಚಣಿ ಬರಲಿದೆ. ಮೃತರಿಗೂ ಪಿಂಚಣಿ ನೀಡುತ್ತಿರುವ ಬಗ್ಗೆ ಸರ್ವೆ ನಡೆಯುತ್ತಿದೆ. ಈಗ ಆಧಾರ್ ಜೋಡಣೆ ಮಾಡುವುದರಿಂದ ₹500 ಕೋಟಿ ಉಳಿತಾಯವಾಗಲಿದೆ ಎಂದರು.
ಸಿದ್ದರಾಮಯ್ಯ ಪಕ್ಷಾಂತರಿ, ಜೆಡಿಎಸ್ ಸವಕಲು ನಾಣ್ಯ: ಸಣ್ಣಪುಟ್ಟ ಸಮಾಜ ದೂರವಿಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅಶೋಕ್, ಮೂರು ವರ್ಷದಲ್ಲಿ ಜೆಡಿಎಸ್ ಇರಲ್ಲ. ಜೆಡಿಎಸ್ ಸವಕಲು ನಾಣ್ಯ ಇದ್ದಂತೆ. ಬ್ಯಾಟರಿ ಹಾಕಿಕೊಂಡು ಹುಡುಕಬೇಕು. ಆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ’ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದಿರುವುದರಿಂದ ಅವರು ಸಹ ಒಂದು ರೀತಿ ಅನರ್ಹರೇ.. ಅವರು ಪಕ್ಷಾಂತರಿ. ಮೂರು ಪಕ್ಷದಲ್ಲಿ (ಪಕ್ಷೇತರ, ಜೆಡಿಎಸ್, ಕಾಂಗ್ರೆಸ್) ಇದ್ದು ಬಂದವರು. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದಾಗ ಅವರ ನಿಜವಾದ ಬಣ್ಣ ಬಯಲಾಗುತ್ತದೆ ಎಂದರು.