ಹಾಸನ : ಜಿಲ್ಲೆಯ ಅರಕಲಗೂಡು ತಾಲೂಕಿನ ಉತ್ತರಭಾಗ ಗಡಿಯಲ್ಲಿ ಹೇಮಾವತಿ ಮತ್ತು ದಕ್ಷಿಣ ಭಾಗದಲ್ಲಿ ಕಾವೇರಿ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನವಸತಿ ಪ್ರದೇಶ,ಅಪಾರ ಪ್ರಮಾಣದ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಹೇಮಾವತಿ ಜಲಾಶಯದಿಂದ ಅಧಿಕ ನೀರು ಬಿಟ್ಟ ಪರಿಣಾಮ ತಾಲೂಕಿನ ಮರಡಿ, ಹೊನಗಾನಹಳ್ಳಿ, ಹೆಬ್ಬಾಲೆ, ಅತ್ನಿ, ಗಂಗನಾಳು ,ಗಂಜಲಗೂಡು, ಅಣ್ಣಿಗನಹಳ್ಳಿ, ಉಪ್ಪಾರಕೊಪ್ಪಲು, ಬಸವನಹಳ್ಳಿ ಹಾಗೂ ಹರದೂರಪುರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಅಡಿಕೆ, ಬಾಳೆ, ತೆಂಗು, ಮೆಕ್ಕೆಜೋಳ, ಭತ್ತ, ರಾಗಿ, ಶುಂಠಿ ಸೇರಿದಂತೆ ಇತರ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ನದಿ ನೀರಿನಿಂದ ಜಲಾವೃತಗೊಂಡ ಜನ ವಸತಿ ಹಾಗೂ ಕೃಷಿ ಪ್ರದೇಶಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಹೇಮಾವತಿ, ಕಾವೇರಿ ನದಿ ಪಾತ್ರದಲ್ಲಿ ನೆರೆಯಿಂದ ಉಂಟಾಗಿರುವ ಕೃಷಿ, ಜನವಸತಿ ಪ್ರದೇಶದ ಹಾನಿ ಕುರಿತು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಖರ ಮಾಹಿತಿ ಲಭ್ಯವಾದ ನಂತರ ಸರಕಾರಕ್ಕೆ ಹಾನಿ ಕುರಿತು ಮಾಹಿತಿ ನೀಡಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದ್ರು. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ ಮಾಡಿದರು.
ಹೇಮಾವತಿ ನದಿ ನೀರು ಹಳ್ಳದ ಪ್ರದೇಶಕ್ಕೆ ವಿಸ್ತರಣೆಗೊಂಡ ಪರಿಣಾಮ ಹೊಳೆನರಸೀಪುರ - ಅರಕಲಗೂಡು,ಹರದೂರುಪುರ - ಪಡವಲಹಿಪ್ಪೆ ಹಾಗೂ ಹೊಳೆನರಸೀಪುರ-ಗೊರೂರು ನಡುವಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇಂದು ಬೆಳಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.