ಹಾಸನ: ದಲಿತರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲರಾಗಿರುವ ಜಿಲ್ಲಾಡಳಿತ ಮತ್ತು ಬಿಜೆಪಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಹಾಸನ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಅಂಬೇಡ್ಕರ್ ಅವರ ಬೃಹತ್ ಚಿತ್ರ ಹಾಗೂ ದಲಿತ ಧ್ವಜಗಳೊಂದಿಗೆ ಘೋಷಣೆಗಳನ್ನು ಕೂಗುತ್ತಾ ಹೊರಟ ಪ್ರತಿಭಟನಾ ಮೆರವಣಿಗೆಯು ಮಹಾವೀರ ವೃತ್ತ, ಕಸ್ತೂರಬಾ ರಸ್ತೆ ಮೂಲಕ ಎನ್.ಆರ್. ವೃತ್ತಕ್ಕೆ ಬಂದು, ಅಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಪ್ರತಿಭಟನಾಕಾರರು, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಮೇಲಿನ ದೌರ್ಜನ್ಯಕ್ಕೆ ಹಾಸನ ಜಿಲ್ಲೆ ಹೊರತಾಗಿಲ್ಲ. ಅದರಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 7 ದಲಿತ ಯುವಕರ ಕೊಲೆಗಳಾಗಿವೆ. ಅಲ್ಲದೆ ದಲಿತ ಯುವತಿಯರು, ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ದೌರ್ಜನ್ಯ ಪ್ರಕರಣಗಳು ಸಾಲುಸಾಲಾಗಿ ಘಟಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಹೀಗಿದ್ದರೂ ಡಿಸಿ, ಎಸ್ಪಿ ಅವರು ಕಾರ್ಯ ಪ್ರವೃತ್ತರಾಗದೆ ಇಡೀ ದಲಿತ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ಖಂಡನೀಯ. ದಲಿತ ಸಮುದಾಯಕ್ಕೆ ನ್ಯಾಯ, ರಕ್ಷಣೆ ನೀಡಬೇಕು. ಕೊಲೆಯಾದವರ ಕುಟುಂಬದ ಸದಸ್ಯರೊಬ್ಬರಿಗೆ ಕಾನೂನು ಪ್ರಕಾರ ಸರ್ಕಾರಿ ಕೆಲಸವನ್ನು ಕೊಡಿಸಬೇಕು ಹಾಗೂ ಸರ್ಕಾರದಿಂದ ಸಿಗುವ ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.