ಹಾಸನ: ನಗರದ ಹೊರವಲಯದಲ್ಲಿರುವ ಬೃಂದಾವನ ಹೋಟೆಲ್ನ ಮಾಲೀಕರಾದ ರಂಗಸ್ವಾಮಿ ಎಂಬುವವರು ಡೈರಿ ಡೇ ಕಂಪನಿಯಿಂದ ಐಸ್ ಕ್ರೀಂ ಮಾರಾಟಕ್ಕಾಗಿ ಒಂದು ರೆಫ್ರಿಜರೇಟರ್ ಜೊತೆಗೆ ಐಸ್ ಕ್ರೀಮ್ ಉತ್ಪನ್ನಗಳನ್ನ ತೆಗೆದುಕೊಂಡಿದ್ದರು. ಬಳಿಕ ಹೆಚ್ಚು ವ್ಯಾಪಾರವಾಗದ ಹಿನ್ನೆಲೆ ಇದನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಕಂಪನಿ ಮೇಲ್ವಿಚಾರಕ ಚೇತನ್ ಅವರಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಚೇತನ್ ಏಕಾಏಕಿ ಸುಮಾರು 20 ವ್ಯಕ್ತಿಗಳೊಂದಿಗೆ ಬಂದು ಹೋಟೆಲ್ ಧ್ವಂಸಗೊಳಿಸಿದ್ದಾರೆ.
ರೆಫ್ರಿಜರೇಟರ್ ವಾಪಸ್ ತೆಗೆದುಕೊಂಡು ಹೋಗುವಂತೆ ರಂಗಸ್ವಾಮಿ ಹೇಳಿದ ಬಳಿಕ ಚೇತನ್ ಎಂಬಾತ ಅವರಿಗೆ ಕರೆ ಮಾಡಿ, ಎಲ್ಲಿದ್ದೀಯಾ ನಾನು ನಿಮ್ಮ ಹೋಟೆಲ್ಗೆ ತೆಗೆದುಕೊಂಡು ಹೋಗಲು ಬರುತ್ತಿದ್ದೇನೆ ಎಂದಿದ್ದಾನೆ. ನಂತರ ಮಾಲೀಕ ಬನ್ನಿ ನಾನು ಮನೆಯಲ್ಲಿ ಇದ್ದೇನೆ ಅಂದಿದ್ದಾರೆ. ಇದಾದ ಬಳಿಕ 15 ನಿಮಿಷದ ನಂತರ ಹೋಟೆಲ್ ಮೇಲೆ ಏಕಾಏಕಿ ದಾಳಿ ನಡೆಸಿ, ಸಿಸಿಟಿವಿ ಸೇರಿದಂತೆ ಹೋಟೆಲ್ನ ಕಿಟಕಿ ಗಾಜು ಹಾಗೂ ಕೇಬಲ್ಗಳನ್ನು ಮಾರಕಾಸ್ತ್ರಗಳಿಂದ ಧ್ವಂಸಗೊಳಿಸಿದ್ದಾರೆ. ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ಮನಗಂಡ ಅವರು ಸಿಸಿಟಿವಿಯನ್ನು ಕೂಡ ಕದ್ದೊಯ್ದಿದ್ದಾರೆ. ಹೋಟೆಲ್ನ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಾಶ:
ಮಾಲೀಕರು ಹೇಳುವ ಪ್ರಕಾರ ಈ ಘಟನೆಯಿಂದ ಸುಮಾರು 5ರಿಂದ 6 ಲಕ್ಷ ಮೌಲ್ಯದ ವಸ್ತುಗಳು ನಾಶವಾಗಿವೆ. ಅಲ್ಲದೇ ಅಲ್ಲಿಂದ ಹಣವನ್ನು ಕೂಡ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯಿಂದ ನಮ್ಮ ಹೋಟೆಲ್ ವ್ಯಾಪಾರ ಕೂಡ ಇನ್ನು ಮುಂದೆ ನಷ್ಟವನ್ನು ಅನುಭವಿಸುತ್ತದೆ, ದಯಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.
ಓದಿ:ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ಜಗಳ.. ತಮ್ಮನಿಂದ ಅಣ್ಣನ ಹತ್ಯೆ
ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಕೆಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಕೃತ್ಯ ನಡೆದ ಘಟನಾವಳಿ ಸೆರೆಯಾಗಿದ್ದ ಸಿಸಿಟಿವಿಯನ್ನು ದುಷ್ಕರ್ಮಿಗಳೇ ಹೊತ್ತೊಯ್ದ ಹಿನ್ನೆಲೆ ಈಗ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.