ಹಾಸನ: ನಂಜುಂಡೇಗೌಡರ ಮಕ್ಕಳ ಚಿತ್ರ ತೆರೆಗೆ ಬಂದಿರುವುದು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದ್ದು, ಸರ್ಕಾರ ಕೊಡುವ ಪ್ರಶಸ್ತಿಗಿಂತ ಜನತೆ ಕೊಡುವ ಪ್ರಶಸ್ತಿ ಬಹಳ ದೊಡ್ಡದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಾಲಗಾಮೆ ನಂಜುಂಡೇಗೌಡರ ಚಿತ್ರೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಂಜುಂಡೇಗೌಡರ ಚಿತ್ರದಲ್ಲಿ ಮನೋ ವಿಕಾಸಕ್ಕೆ ಸಂಬಂಧಿಸಿದ ವಿಷಯಗಳಿದ್ದವು. ಅವುಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ. ಅನೇಕ ವರ್ಷಗಳ ಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಇದೀಗ ಅವರನ್ನು ಜಿಲ್ಲೆಯ ಜನತೆ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದರು.
ಅನೇಕ ತೊಂದರೆಗಳನ್ನು ಎದುರಿಸಿ ಎದೆಗುಂದದೆ ಇಷ್ಟು ಎತ್ತರಕ್ಕೆ ಬೆಳೆದವರು ನಂಜುಂಡೇಗೌಡರು. ಮುಂದೆಯೂ ಇನ್ನೂ ಹೆಚ್ಚಿನ ಚಿತ್ರ ಮಾಡಲು ಉತ್ಸಾಹ ಹಾಗೂ ಅವಕಾಶ ಸಿಗಲಿ. ಮುಂದಿನ ದಿನಗಳಲ್ಲಿ ಪ್ರದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಸಾಧನೆಗೆ ದೊರಕಲಿ ಎಂದು ಶುಭ ಹಾರೈಸಿದರು.