ಹಾಸನ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 125 ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ಪಕ್ಷಗಳ ಬೆಂಬಲಿತ ಹಾಗೂ ಪಕ್ಷೇತರವಾಗಿ ಸ್ಪರ್ಧಿಸಿರುವ 3867 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ತಾಲೂಕಿನ ಸಾಲಗಾಮೆ ಮತಗಟ್ಟೆಯಲ್ಲಿ 97 ವರ್ಷದ ಸ್ವತಂತ್ರ ಹೋರಾಟಗಾರ ಶಿವಪ್ಪ ವ್ಹೀಲ್ ಚೇರ್ನಲ್ಲಿ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಅದೇ ರೀತಿ 88 ವರ್ಷದ ವಯೋವೃದ್ಧೆ ಲಕ್ಷ್ಮಮ್ಮ ಇಳಿವಯಸ್ಸಿನಲ್ಲಿ ಮತಗಟ್ಟೆಗೆ ಬಂದು ಕೆಲವತ್ತಿ ಗ್ರಾಮದಲ್ಲಿ ಮತ ಚಲಾಯಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಅಲ್ಲದೆ ಎರಡು ದಶಕಗಳಿಂದ ಜೆಡಿಎಸ್ ಭದ್ರಕೋಟೆಯಾಗಿದ್ದ ದ್ಯಾಪಲಾಪುರದಲ್ಲಿ ಅವಿರೋಧ ಆಯ್ಕೆಯಾಗುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸ್ಪರ್ಧೆ ಮಾಡಿದ್ದರಿಂದ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿಕಲಚೇತನ ಮಂಜಪ್ಪ ಎಂಬುವರು ಊರುಗೋಲಿನ ಸಹಾಯದಿಂದ ಮತಗಟ್ಟೆಗೆ ಬಂದು ಮತ ಹಾಕಿದರೆ, ಕೆಲವತ್ತಿಯಲ್ಲಿ ದೊರೆಸ್ವಾಮಿ ವ್ಹೀಲ್ ಚೇರ್ನಲ್ಲಿ ಬಂದು ಮತದಾನ ಮಾಡಿದರು.
ಇನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಿರುವ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗಲಾಟೆಯಾಗುವ ಸಾಧ್ಯತೆ ಕಾರಣಕ್ಕೆ ಕೆಎಸ್ಆರ್ಪಿ ತುಕಡಿ ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಮತಗಟ್ಟೆಯಿಂದ ಸುಮಾರು ನೂರು ಮೀಟರ್ ಅಂತರದವರೆಗೆ ಕೆಂಪು ವಲಯ ಎಂದು ಘೋಷಿಸಿ ಅಂತರ ಕಾಯ್ದುಕೊಂಡು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.
ಓದಿ: ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ: FSL ರಿಪೋರ್ಟ್ ನಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ
ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವತಿಯೊಬ್ಬರು ಈಟಿವಿ ಭಾರತಯೊಂದಿಗೆ ಮಾತನಾಡಿ, ಮೊದಲ ಬಾರಿಗೆ ನಾನು ಮತದಾನ ಮಾಡುತ್ತಿದ್ದು, ಬಹಳ ಖುಷಿಯಾಯಿತು. ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಮತದಾನ ಮಾಡಲು ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದ್ದು, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುಲು ಅವಕಾಶ ಸಿಕ್ಕಿದೆ ಎಂದರು.
ಇನ್ನು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ವನಮಾಲ ಪುತ್ರ ಭಾಸ್ಕರ್ ಕೂಡ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದು, ಅಭಿವೃದ್ಧಿ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು ವಿಶೇಷವಾಗಿದೆ. ಕಳೆದ ಐದು ವರ್ಷಗಳ ಕಾಲ ನನ್ನ ತಾಯಿ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದರು. ಅದೇ ರೀತಿ ನಿಟ್ಟೂರು ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಕಡೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.