ಅರಸೀಕೆರೆ: ಕೊರೋನಾದಂತಹ ಸಂದಿಗ್ಧ ಸಮಯದಲ್ಲೂ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾರಕ ಸೋಂಕು ಕೋವಿಡ್ ದಿನೇ ದಿನೆ ಹೆಚ್ಚುತ್ತಿದೆ. ಈ ವೇಳೆ ಸಾರ್ವಜನಿಕರ ನೆರವಿಗೆ ಬರಬೇಕಾದ ಸರ್ಕಾರ ಕೋವಿಡ್ ಚಿಕಿತ್ಸಾ ಪರಿಕರಗಳ ಖರೀದಿ ಹಾಗೂ ಔಷಧಿ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದಾಗ ಜನರಿಗೆ ನೀಡಿದ ಆಶ್ವಾಸನೆಯಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಜನವಿರೋಧಿ ಹಾಗೂ ರೈತ ವಿರೋಧಿ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಕೆಟ್ಟ ಸರ್ಕಾರವಾಗಿ ಹೊರ ಹೊಮ್ಮಿದೆ. ರಾಜ್ಯದಿಂದ 26 ಮಂದಿ ಲೋಕಸಭೆಗೆ ಆಯ್ಕೆಯಾದರೂ ಸಹ ರಾಜ್ಯದ ಹಿತಕ್ಕಾಗಿ ಕೇಂದ್ರದಲ್ಲಿ ಮನವಿ ಮಾಡುವುದರಲ್ಲಿ ಎಡವಿದ್ದಾರೆ. ಜಿಎಸ್ಟಿ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಪಡೆಯಲು ವಿಫಲವಾಗಿದ್ದಾರೆ ಎಂದು ಟೀಕಿಸಿದರು.
![Pushpa Amarnath allegation](https://etvbharatimages.akamaized.net/etvbharat/prod-images/kn-hsn-04-congress-pushpa-avb-7203289-hd_09092020035315_0909f_00000_839.jpg)
ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿಯನ್ನು ಕಡಿತಗೊಳಿಸಿದೆ ಹಾಗೂ ಅನಿಲ ದರವನ್ನು ಏರಿಕೆ ಮಾಡುತ್ತಾ ಬಡ ಮಧ್ಯಮ ವರ್ಗದ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ರಾಜ್ಯದಲ್ಲಿ ಆರು ದಿನಗಳ ಪ್ರವಾಸ ಕೈಗೊಂಡಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ-ಅರಸೀಕೆರೆ ಹಾಗೂ ಬೇಲೂರು ತಾಲೂಕಿಗೆ ಭೇಟಿ ನೀಡಲಾಗಿದ್ದು, ಬರುವ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಹಾಗೂ ಮಹಿಳಾ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಅವರು ಹೇಳಿದರು.
ಇನ್ನು ಹಾಸನ ಜಿಲ್ಲಾ ಪಂಚಾಯತಿಯ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರಿಗೆ ಜೆಡಿಎಸ್ ಪಕ್ಷದವರು ಸಭೆ ನಡೆಸಲು ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಇದೇ ವೇಳೆ ಕಾಂಗ್ರೆಸ್ ಮುಖಂಡರು ಪುಷ್ಪ ಅಮರನಾಥ್ ಗಮನಕ್ಕೆ ತಂದರು. ಈ ವಿಚಾರ ನನ್ನ ಗಮನಕ್ಕೂ ಕೂಡ ಬಂದಿದೆ. ನಾನು ಡಿಸಿ, ಸಿಇಒ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮುಂದೆ ಈ ರೀತಿ ಆಗದಂತೆ ಕ್ರಮ ಜರುಗಿಸಬೇಕು ಎಂದು ಪತ್ರದ ಮೂಲಕ ತಿಳಿಸುತ್ತೇನೆ ಎಂದರು. ಬಳಿಕ ಸಮೀಪದ ಹಾರನಹಳ್ಳಿಯ ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.