ಹಾಸನ: ಪರಿಸರದ ಉಳಿವಿಗಾಗಿ ಮಕ್ಕಳ ತಂಡ ಕಟ್ಟಿಕೊಂಡು ಜೀವನದ ಇಳಿವಯಸ್ಸಿನಲ್ಲಿ ಕಾಂಚನಮಾಲ ಎಂಬ ಮಹಿಳೆ ಗುದ್ದಲಿ ಹಿಡಿದು ಸಾಂಸಾರಿಕ ಜೀವನವನ್ನೇ ಮರೆತು ಪರಿಸರ ಮಾತೆಯಾಗಿದ್ದಾರೆ.

ದೇಶ ಮತ್ತು ಮಣ್ಣಿನ ಋಣಕ್ಕಾಗಿ ಇವರು ಸಾಂಸಾರಿಕ ಜೀವನವನ್ನೆ ತ್ಯಾಗಮಾಡಿದ ಮಹಾತಾಯಿ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿಯಾಗಿರುವ ಇವರು ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಕಾರ್ಯಗಳತ್ತ ಮುಖ ಮಾಡಿ ನಿಂತರು. ಉನ್ನತ ವ್ಯಾಸಂಗದ ಬಳಿಕ ಸಕಲೇಶಪುರದ ಬಾಳ್ಳುಪೇಟೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ರು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ವಿವಾಹ ಬಂಧನದಿಂದಲೂ ದೂರ ಉಳಿದು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ನಿವೃತ್ತಿ ಬಳಿಕ ಸಮಾಜ ಸೇವೆ ಮತ್ತು ಭೂ ತಾಯಿಯ ಸೇವೆ ಮಾಡಬೇಕು ಎಂಬ ಆಶಯದೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ಗೆ ತರಬೇತುದಾರರಾಗಿ ಸೇರಿ 34 ವರ್ಷಗಳಿಂದ ಯಾವುದೇ ಫಲಾಫೇಕ್ಷೆಯಿಲ್ಲದೇ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳಬೇಕು ಎಂಬ ಛಲ, ಧೈರ್ಯ, ನಿರಂತರ ಶ್ರಮ ಮತ್ತು ಶ್ರದ್ಧೆಯಿದ್ರೆ ಏನನ್ನಾದ್ರು ಸಾಧಿಸಬಹುದು. ನನಗೆ ಮೊದಲಿನಿಂದಲೂ ಸಮಾಜ ಸೇವೆ ಅಂದ್ರೆ ಪ್ರೀತಿ. ನಾನು ಇದಕ್ಕಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ಸ್ಕೌಟ್ ಮತ್ತು ಗೈಡ್ಸ್ ಮಕ್ಕಳನ್ನು ಜೊತೆಗೂಡಿಸಿ ಪ್ರತಿನಿತ್ಯ ಗಿಡ ನೆಡುವ, ಕಲ್ಯಾಣಿ ಸ್ವಚ್ಛತೆ ಮತ್ತು ಹೂಳೆತ್ತುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ. ಈ ಮಕ್ಕಳ ಉತ್ಸಾಹ, ಇವರು ಮಾಡುವ ಕೆಲಸದಲ್ಲಿ ನಾನು ಬೆವರು ಸುರಿಸಿ ಕೆಲಸ ಮಾಡಿದ್ರೆ ಮಕ್ಕಳಿಗೆ ಪ್ರೇರಣೆ ಸಿಗುತ್ತೆ. ನಾನು ಬದುಕಿರುವ ತನಕ ದೇಶ ಸೇವೆ ಮಾಡುತ್ತೇನೆ. ಇದಕ್ಕೆ ನನಗೆ ತಂದೆಯೇ ಪ್ರೇರಣೆ. ಕೊನೆಯ ಉಸಿರಿರುವ ತನಕ ದೇಶ ಸೇವೆ, ಭೂತಾಯಿ ಸೇವೆ ಮಾಡಲು ಅವಕಾಶ ಕೊಡು ಎಂದು ದೇವರಲ್ಲಿ ಬೇಡುವುದಾಗಿ ಅವರು ತಿಳಿಸಿದರು.

ಇನ್ನು ಇವರು ಕರುನಾಡು ಕಂಡ ಶ್ರೇಷ್ಠ ಮಹಿಳೆ ಸಾಲು ಮರದ ತಿಮ್ಮಕ್ಕನ ಹಾಗೆಯೇ 34 ವರ್ಷಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸುತ್ತಿದ್ದಾರೆ.