ಅರಕಲಗೂಡು: ಪಟ್ಟಣದ ಹೃದಯ ಭಾಗದಲ್ಲಿರುವ ಕ್ರೀಡಾಂಗಣನನ್ನು ಅವೈಜ್ಞಾನಿಕತೆಯಿಂದ ಕಟ್ಟಲಾಗಿದ್ದು ಮಳೆ ಬಂದರೆ ಸಾಕು ನೀರು ತುಂಬಿ ಅವ್ಯವಸ್ಥೆಯ ತಾಣವಾಗುತ್ತದೆ. ಇದರಿಂದ ವಾಯು ವಿಹಾರಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಲ್ಲಿ ಮೊದಲು ದೊಡ್ಡ ಕೆರೆಯಿತ್ತು, ಅದನ್ನು ಮುಚ್ಚಿ ಕ್ರೀಡಾಂಗಣ, ಬಸ್ ಸ್ಟಾಪ್, ಪಾರ್ಕ್ ಮಾಡಲಾಗಿದೆ. ಸರ್ಕಾರ ಈ ಕ್ರೀಡಾಂಗಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಆದರೆ, ಅದು ಉಪಯೋಗವಾಗಿಲ್ಲ. ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಕೋಟ್ಯಂತರ ಅನುದಾನ ನೀಡಿದ್ದರೂ ಕ್ರೀಡಾಂಗಣವನ್ನು ಸರಿ ಮಾಡಲಾಗುತ್ತಿಲ್ಲ.
ಮಳೆಗಾಲದಲ್ಲಿ ಹರಿದು ಬರುವ ನೀರು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ಇಲ್ಲಿಯೇ ನಿಲ್ಲುತ್ತಿದೆ. ಕ್ರೀಡಾಂಗಣದ ನೆಲದ ಮಟ್ಟವನ್ನು ಹೆಚ್ಚು ಮಾಡಬೇಕಾಗಿತ್ತು, ಅದನ್ನು ಮಾಡಲಾಗಿಲ್ಲ. ಕಟ್ಟಡಗಳ ಮೇಲೆ ಗಿಡ-ಗಂಟಿಗಳು ಬೆಳೆದಿವೆ. ಕಟ್ಟಡಗಳು ಶಿಥಿಲಗೊಂಡಿದೆ. ಸರಿಯಾದ ನಿರ್ವಹಣೆ ಇಲ್ಲ.
ಅಧಿಕಾರಿಗಳಿಗೆ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಕ್ರೀಡಾಂಗಣದ ಸುತ್ತ ಫುಟ್ ಪಾತ್ ನಿರ್ಮಿಸಿ ವಾಯುವಿಹಾರಿಗಳಿಗೆ ಅನುವು ಮಾಡಿಕೊಡಬೇಕು ಎನ್ನುತ್ತಾರೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಾಕ್ಷ ಶಶಿಕುಮಾರ್.