ಹಾಸನ: ಲಾಕ್ಡೌನ್ ಆದೇಶ ಜಾರಿಯಲ್ಲಿದ್ದರೂ ಅನೇಕ ಜನರು ತಮ್ಮ ವಾಹನಗಳನ್ನು ಸುಖಾ ಸುಮ್ಮನೆ ರಸ್ತೆಗಿಳಿಸಿ ಓಡಾಡುತ್ತಿದ್ದು, ಅಂತವರಿಗೆ ಬ್ರೇಕ್ ಹಾಕಲು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮೇ 3ರವರೆಗೆ ಹೊಸ ತಂತ್ರ ಉಪಾಯೋಗಿಸಿ ಆದೇಶ ಜಾರಿ ಮಾಡಿದ್ದಾರೆ.
ಎಪಿಎಂಸಿಗೆ ಹೋಗುವ ಬಿ.ಎಂ. ರಸ್ತೆಗೆ ವಾಹನ ಚಾಲಕರು ಯಾರಾದರು ಹೋದರೆ ಏಕಮುಖವಾಗಿ ಹೋಗಬಹುದು. ಆದರೆ ಮತ್ತೆ ಬಂದ ದಾರಿಯಲ್ಲಿ ಹೋಗುವಂತಿಲ್ಲ. ತಣ್ಣೀರುಹಳ್ಳದ ಬೈಪಾಸ್ ರಸ್ತೆ, ಗೊರೂರು ರಸ್ತೆಯಿಂದ ಸಂತೆ ಪೇಟೆ ಮೂಲಕವೇ ಬರಬೇಕು. ಇನ್ನು ನಗರದಿಂದ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಕೊಂಡುಕೊಳ್ಳಲು ವಾಹನದ ಮೂಲಕ ತೆರಳಿದರೆ ವಾಪಸ್ ತಣ್ಣೀರುಹಳ್ಳದ ರಸ್ತೆ ಮೂಲಕ ತೆರಳಿ ಬೈಪಾಸ್ ಮೂಲಕವೇ ವಾಪಸ್ ಹೋಗಬೇಕಾಗಿದೆ.
ಇನ್ನು ಸಂತೇಪೇಟೆಯಿಂದ ಗೊರೂರು ರಸ್ತೆಗೆ ವಾಹನ ಹೋದರೆ ಮತ್ತೆ ಬಿಟ್ಟಗೌಡನಹಳ್ಳಿ ಬೈಪಾಸ್ ಮೂಲಕ ನಗರಕ್ಕೆ ವಾಪಸ್ ಬರಬೇಕಾಗಿದೆ. ವಾಹನ ಚಾಲಕರು ಒಮ್ಮೆ ಯೋಚಿಸಿ ಈ ರಸ್ತೆ ಮೂಲಕ ಹೋಗುವುದು ಉತ್ತಮ. ಸಮ್ಮನೆ ಒಡಾಡುವ ವಾಹನಗಳ ಸಂಖ್ಯೆ ಕಡಿಮೆ ಮಾಡಲು ಪೊಲೀಸ್ ಇಲಾಖೆ ಇಷ್ಟೆಲ್ಲಾ ಸರ್ಕಸ್ ಮಾಡಿಸಬೇಕಾದ ಪರಿಸ್ಥಿತಿ ಬಂದಿದೆ. ಲಾಕ್ಡೌನ್ ಮುಗಿದ ನಂತರವೇ ವಾಹನ ಚಾಲಕರು ತಮಗಿಷ್ಟ ಬಂದ ಕಡೆ ತಿರುಗಾಡಲು ಅವಕಾಶ ಸಿಗಲಿದೆ.